ಬಂಟರ ಸಂಘ “ಅತ್ಯುತ್ತಮ ಕಾರ್ಯಕರ್ತ ವಾರ್ಷಿಕ ಪ್ರಶಸ್ತಿ”ಗೆ ಮುಂಡಪ್ಪ ಪಯ್ಯಡೆ ಆಯ್ಕೆ
ಮುಂದೆ ನಾವೆಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗಾಗಿ ಶ್ರಮಿ ಸೋಣ ಎಂದು ತಿಳಿಸಿ ಶುಭ ಹಾರೈಸಿದರು
Team Udayavani, Feb 4, 2021, 2:27 PM IST
ಮುಂಬಯಿ, ಫೆ. 3: ನಗರದ ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಇದರ 92ನೇ ವಾರ್ಷಿಕ ಮಹಾಸಭೆಯು ಜ. 31ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ವಾರ್ಷಿಕ ಪುರಸ್ಕಾರಗಳನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಸಂಘದ ಅತ್ಯುತ್ತಮ ಕಾರ್ಯಕರ್ತ ವಾರ್ಷಿಕ ಪ್ರಶಸ್ತಿಯನ್ನು ಸಂಘದ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಸಂಘದ ನೂತನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ ಅವರಿಗೆ ಪ್ರದಾನ ಮಾಡಿ, ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಮುಂಡಪ್ಪ ಎಸ್. ಪಯ್ಯಡೆ ಅವರು, ಮಾಜಿ ಅಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಅವರ ಒತ್ತಾಯದಿಂದ ಬಂಟರ ಸಂಘಕ್ಕೆ ಸೇರಿ ಇಂದು ಅತ್ಯುತ್ತಮ ಕಾರ್ಯಕರ್ತ ಚಿನ್ನದ ಪದಕ ಪಡೆದಿರುವುದಕ್ಕೆ ಸಂತಸವಾಗುತ್ತಿದೆ. ನಿರ್ಮಲ ಮನಸ್ಸಿನ ಸೇವೆಗೆ ಭಗವಂತನ ಆಶೀರ್ವಾದವಿದೆ. ಸ್ವಇಚ್ಛೆಯಿಂದ ಸಮಾಜ ಸೇವೆ ಮಾಡುತ್ತಿರುವ ತನಗೆ ಇದರಿಂದ ಆತ್ಮತೃಪ್ತಿ ದೊರಕುತ್ತಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಅತ್ಯುತ್ತಮ ಪ್ರಾದೇಶಿಕ ಸಮಿತಿಗಾಗಿ ನೀಡುತ್ತಿರುವ ನಗದು ಬಹುಮಾನ ಮತ್ತು ಟ್ರೋಯನ್ನು ಪ್ರಥಮ: ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ತಂಡಕ್ಕೆ, ದ್ವಿತೀಯ: ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ತಂಡಕ್ಕೆ ಹಾಗೂ ತೃತೀಯ: ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ತಂಡಕ್ಕೆ ಐಕಳ ಹರೀಶ್ ಶೆಟ್ಟಿ ಅವರು ಪ್ರದಾನ ಮಾಡಿದರು.
ಸಂಘದ ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ ವಿಜೇತ ತಂಡಗಳ ಹೆಸರು ಘೋಷಿಸಿದರು. ಸಂಘಕ್ಕೆ ಅತೀ ಹೆಚ್ಚು ಸದಸ್ಯರನ್ನಾಗಿಸಿ ವರ್ಷದ ಸದಸ್ಯತ್ವ ಚಿನ್ನದ ಪುರಸ್ಕಾರಕ್ಕೆ ಆಯ್ಕೆಗೊಂಡ ಅಂಧೇರಿ – ಬಾಂದ್ರಾ ಸಮಿತಿಯ ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಎ. ಶೆಟ್ಟಿ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಪುರಸ್ಕೃತರ ಹೆಸರು ಘೋಷಿಸಿದರು. ಸಂಘದ ನೂತನ ವಿಶ್ವಸ್ಥರಾಗಿ ನೇಮಕಗೊಂಡ ಸಮಾಜ ಸೇವಕ, ಹೊಟೇಲ್ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿರಾರ್ ಶಂಕರ್ ಶೆಟ್ಟಿ ಅವರು, ವಿಶ್ವಸ್ಥ ಹುದ್ದೆ ಸಂಘದ ಮಹತ್ವದ ಹುದ್ದೆಯಾಗಿದ್ದು, ಅದನ್ನು ಮನಪೂರ್ವಕವಾಗಿ ಸ್ವೀಕರಿಸಿದ್ದೇನೆ. ಮುಂದೆ ನಾವೆಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗಾಗಿ ಶ್ರಮಿ ಸೋಣ ಎಂದು ತಿಳಿಸಿ ಶುಭ ಹಾರೈಸಿದರು. ಸಂಘದ ಮಾಜಿ ಅಧ್ಯಕ್ಷರು, ವಿಶ್ವಸ್ಥರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಪ್ರಾದೇಶಿಕ ಸಮಿತಿಗಳ ಸಮನ್ವಯಕರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳನ್ನು ಗೌರವಿಸಲಾಯಿತು.
ಸಂಘದ ವಾರ್ಷಿಕ ಮಹಾಸಭೆಯ ವರದಿ ಪುಸ್ತಕ ತಯಾರಿಸುವಲ್ಲಿ ಸಹಕರಿಸಿದ ಡಾ| ಪ್ರಭಾಕರ ಶೆಟ್ಟಿ ಬಿ., ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ಇವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಇತರ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಟ್ರಸ್ಟಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
*ಚಿತ್ರ-ವರದಿ:
ಪ್ರೇಮನಾಥ್ ಶೆಟ್ಟಿ ಮುಂಡ್ಕೂರು