ಇಳಿ ವಯಸ್ಸಿನಲ್ಲಿ ನೋಡಿಕೊಳ್ಳದ ಮಗ
ದತ್ತು ಮಗನಿಗೆ ನೀಡಿದ ಆಸ್ತಿ ಮರಳಿ ಪಡೆದ ತಾಯಿ
Team Udayavani, Feb 6, 2021, 7:55 PM IST
ಹಾನಗಲ್ಲ: ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007ರ ಅನ್ವಯ ದತ್ತು ಮಗನಿಂದ ಆಸ್ತಿ ಮರಳಿ ಪಡೆಯುವಲ್ಲಿ ಚಿಕ್ಕಾಂಶಿ ಹೊಸೂರಿನ ರತ್ನವ್ವ ಬಸಪ್ಪ ಬ್ಯಾಡಗಿ ಯಶಸ್ವಿಯಾಗಿದ್ದಾರೆ.
ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ರತ್ನವ್ವ ಹಾಗೂ ಬಸಪ್ಪ ಬ್ಯಾಡಗಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳಿರಲಿಲ್ಲ. ಆದರೆ ಈ ದಂಪತಿ ಗಂಡು ಮಗುವೊಂದು ತಮ್ಮ ಭವಿಷ್ಯದ ಲಾಲನೆ ಪಾಲನೆಗೆ ಬೇಕೆಂದು ತಮ್ಮ ಮಗಳ ಮಗ(ಮೊಮ್ಮಗ)ನನ್ನು ದತ್ತು ಪಡೆದಿದ್ದರು. ಅಲ್ಲದೆ ತಮ್ಮ ವಾರಸುದಾರನಾಗಿ ಮೊಮ್ಮಗನಿಗೆ ತಮ್ಮ ಆಸ್ತಿ ನೋಂದಣಿ ಮಾಡಿಕೊಟ್ಟಿದ್ದರು.ಆದರೆ ಅವರ ನಿರೀಕ್ಷೆಯಂತೆ ದತ್ತು ಪುತ್ರ ಅವರನ್ನು ಲಾಲನೆ ಪಾಲನೆ ಮಾಡದೆ ನಿರ್ಲಕ್ಷಿಸುತ್ತಿರುವುದನ್ನು ಗಮನಿಸಿ ಹಲವು ಬಾರಿ ತಮ್ಮ ಅಳಲನ್ನು ದತ್ತು ಪುತ್ರನಲ್ಲಿ ತೋಡಿಕೊಂಡಿದ್ದರು. ಇದಾವುದು ಫಲಿಸದೆ ಯಥಾಸ್ಥಿತಿ ಮುಂದುವರೆದಿದ್ದರಿಂದ ಅನಿವಾರ್ಯವಾಗಿ ರತ್ನವ್ವ ಹಾಗೂ ಬಸಪ್ಪ ದಂಪತಿ ತಾವು ವಾರಸುದಾರ ಮೊಮ್ಮಗನಿಗೆ ನೀಡಿದ ಆಸ್ತಿ ಮರಳಿ ಪಡೆಯಲು ಮುಂದಾದರು.
ಈ ಪ್ರಕರಣ ಸವಣೂರಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿತ್ತು.ಕಾಲಾಂತರದಲ್ಲಿ ಬಸಪ್ಪ ಬ್ಯಾಡಗಿ ನಿಧನರಾಗಿ ರತ್ನವ್ವ ಬ್ಯಾಡಗಿ ಒಂಟಿಯಾಗಿ ನೋಡಿಕೊಳ್ಳುವವರಿಲ್ಲದೆ ದಿನ ಸಾಗಿಸುತ್ತಿದ್ದಳು. ಇಂಥ ಸಂದರ್ಭದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಈ ಪ್ರಕರಣವನ್ನು ವಿಚಾರಣೆಗೊಳಪಡಿಸಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಣ್ಣನವರ ಆಸ್ತಿ ದತ್ತು ಪುತ್ರನಿಂದ ರತ್ನವ್ವ ಬ್ಯಾಡಗಿ ಅವರಿಗೆ ಮರಳಿ ನೀಡಿದ್ದಾರೆ.
ನಿಸ್ಸೀಮ ಆಲದಕಟ್ಟಿಯಲ್ಲಿ ಮತ್ತೂಂದು ಪ್ರಕರಣ: ಇಂಥದ್ದೇ ಪ್ರಕರಣವೊಂದು ಹಾನಗಲ್ಲ ತಾಲೂಕಿನ ನಿಸ್ಸಿಮ ಆಲದಕಟ್ಟಿಯಲ್ಲಿ ನಡೆದಿದೆ. ಈ ಗ್ರಾಮದ ಫಕ್ಕೀರವ್ವ ಫಕ್ಕೀರಪ್ಪ ಹನಕನಹಳ್ಳಿ ಎಂಬುವವರಿಗೆ ಎಂಟು ಗಂಡು ಮಕ್ಕಳಿದ್ದಾರೆ. ಆದರೆ ಇವರಿಗಿರುವ 17 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಸಮನಾಗಿ ಹಂಚಿಕೊಂಡಿದ್ದರು.
ಇದನ್ನು ಓದಿ :ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಫಕ್ಕೀರವ್ವ ಇರುವ ಮನೆಯನ್ನು ಆಕೆಯ ಐದನೇ ಪುತ್ರ ತಾಯಿಯಿಂದ ಭಕ್ಷೀಸ ಪತ್ರ ಮಾಡಿಕೊಂಡಿದ್ದನು. ಆದರೆ ತದನಂತರ 5ನೇ ಮಗನಿಂದ ನ್ಯಾಯ ಸಿಗದ ಕಾರಣ ಫಕ್ಕೀರವ್ವ ಆ ಮನೆಯನ್ನು ಮರಳಿ ಪಡೆಯಲು ಸವಣೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಫಕ್ಕೀರವ್ವನಿಗೆ ಮನೆ ಮರಳಿ ಕೊಡಿಸಿ ನ್ಯಾಯ ಒದಗಿಸಿದ್ದಾರೆ.