ರೈತರಿಂದ ಪಾರಂಪರಿಕ ದೇಶಿಬೀಜ ಸಂರಕ್ಷಣೆ
ಮಮದಾಪುರದ ಚಂದ್ರಕಾಂತ ಪಾಟೀಲ ಈ ವಿಷಯದಲ್ಲಿ ವಿಶೇಷ ಸಂಶೋಧನೆಯನ್ನೂ ನಡೆಸಿದ್ದಾರೆ.
Team Udayavani, Feb 20, 2021, 6:02 PM IST
ವಿಜಯಪುರ: ಭಾರತಕ್ಕೆ ರಸಗೊಬ್ಬರ, ವಿದೇಶಿ ಬೀಜ ಪರಿಚಯವಾಗುತ್ತಲೇ ಕೃಷಿ ಪದ್ಧತಿಯಲ್ಲೂ ಬದಲಾಗಿ, ದೇಶೀಯ ಕೃಷಿ ವ್ಯವಸ್ಥೆ ಪರಿವರ್ತನೆಗೊಂಡು,
ಆಧುನೀಕರಣದ ಲೇಪನ ಪಡೆಯಿತು. ಆದರೆ ಜಿಲ್ಲೆಯ ರೈತರು ಮಾತ್ರ ಪಾರಂಪರಿಕ ಕೃಷಿಯ ತನ್ನತನ ಕಳೆದುಕೊಳ್ಳದೇ, ಮೂಲ ತಳಿಯ ಜವಾರಿ ಬೀಜಗಳನ್ನು ಮಾತ್ರ ಸಂರಕ್ಷಿಸಿ ಆಸ್ಮಿತೆ ಮೆರೆಯುತ್ತಿದ್ದಾರೆ.
ಜಗತ್ತಿಗೆ ಮಾಲ್ದಂಡಿ ಎಂಬ ಪೌಷ್ಟಿಕಯುಕ್ತ ಜೋಳದ ಜನ್ಮತಳೆದದ್ದೇ ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರು ಜಿಲ್ಲೆಯಲ್ಲಿ ಪಾರಂಪರಿಕ ಕೃಷಿ ಹಾಗೂ ಇಲ್ಲಿನ ಬೀಜ ಬೆಳೆಯನ್ನು ಕಂಡು ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಹೀಗಾಗಿ 1933ರಲ್ಲಿ ನಗರದ ಹೊರ ವಲಯದಲ್ಲಿ ಹಿಟ್ನಳ್ಳಿ ಬಳಿ ಕೃಷಿ ಫಾರ್ಮ ಆರಂಭಿಸಿದರು. ಜತೆಗೆ ಸಂಶೋಧನಾ ಕೇಂದ್ರವನ್ನೂ ತೆರೆದು ವಿವಿಧ ತಳಿಯ ದೇಶಿಬೀಜ ಅಭಿವೃದ್ಧಿಗೆ ಮುಂದಾದರು. ಇದರ ಫಲವಾಗಿ
ಸುಮಾರು 90 ವಸಂತಗಳ ಹಿಂದೆ ಎಂ 35-1 ಹೆಸರಿನಲ್ಲಿ ಮಳೆ ಆಶ್ರಯದಲ್ಲಿ ಅದರಲ್ಲೂ ಕಡಿಮೆ ಮಳೆ ಬಿದ್ದರೂ ಸಮೃದ್ಧವಾಗಿ ಬೆಳೆಯುವ ಮಾಲ್ದಂಡಿ
ಜೋಳದ ಬೀಜ ಸಂಶೋಧನೆಗೊಂಡಿತು.
ಕಡುಕಪ್ಪು ಮಣ್ಣಿನ ಫಲವತ್ತಾದ ಜಮೀನು ಹೊಂದಿದ್ದ ಡೋಣಿ ನದಿ ತೀರದಲ್ಲಿ ಈ ತಳಿಯ ಜೋಳ ಸಮೃದ್ಧವಾಗಿ ಬೆಳೆಯಲಾರಂಭಿಸಿತು. ಪರಿಣಾಮ ಡೋಣಿ ಬೆಳೆದರೆ ಓಣೆಲ್ಲ ಕಾಳು ಎಂಬ ನಾಣ್ಣುಡಿಯೂ ಜನ್ಮ ತಳೆಯುವ ಮಟ್ಟಿಗೆ ಇಲ್ಲಿ ಅಪ್ಪಟ ದೇಶಿ ಜೋಳದ ಬೀಜವೊಂದು ತನ್ನ ಆಸ್ಮಿತೆ ಉಳಿಸಿಕೊಂಡಿದೆ. ಜತೆಗೆ ವಿಜಯಪುರ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಪ್ರಮುಖ ಜೋಳದ ಬೆಳೆಯಲ್ಲಿ ಮಾಲ್ದಂಡಿಗೆ ಪ್ರಾಮುಖ್ಯತೆ ಇದೆ. ಜಿಲ್ಲೆಯಲ್ಲಂತೂ ಯಾವ ಯೋಜನೆ, ನೆರವು ಇಲ್ಲದೇ ನಮ್ಮ ರೈತರು ಬೀಜ ಸಹಜ ಸಂರಕ್ಷಣೆ ಮಾಡುತ್ತ ಬಂದಿದ್ದಾರೆ.
ಆದಿಲ್ ಶಾಹಿ ಅರಸರಿಂದ ಶಿಕ್ಷಗೊಳಗಾಗಿದ್ದ ಅರಸನ ರಾಜಕೀಯ ಸಲಹೆಗಾರ ಜಗದ್ ಮುರಾರಿ ಉರ್ಫ್ ಮುರಾರೆಪ್ಪ ರಾಜನ ಪ್ರೀತಿ ಸಂಪಾದಿಸಲು ಯೋಜಿಸಿದ್ದ. ಇದಕ್ಕಾಗಿ ಈತನು ರಾಜನ ಪತ್ನಿಯ ಮನವೊಲಿಸಿ, ಮಲ್ಲಿಗೆ ಸುವಾಸನೆಯ ಕರಿನೆಲ್ಲು ಬೆಳೆಲು ಮುಂದಾದ. ಆದಿಲ್ ಶಾಹಿ ಕಾಲದಲ್ಲಿ ಕೊಂಕಣ ಪ್ರದೇಶದಲ್ಲಿ ಬೆಳೆಯುತ್ತಿದ್ದ ವಿಶಿಷ್ಟ ಸುವಾಸನೆಯ ಕರಿನೆಲ್ಲು ವಿಜಯಪುರ ಪ್ರವೇಶವಾಗಿತ್ತು.
ಇದಕ್ಕಾಗಿ ಅಳ್ಳಿಕಂಟಿ, ಮಲಕಾಪುರ, ಚೌಡಾಪುರ, ಕಡಕೋಳ ಸೇರಿದಂತೆ 7 ಗ್ರಾಮಗಳನ್ನು ಸ್ಥಳಾಂತರಿಸಿ ಮಹ್ಮದಪುರ (ಮಮದಾಪುರ) ಎಂಬ ಪುನರ್ವಸತಿ ಗ್ರಾಮವನ್ನೇ ನಿರ್ಮಿಸಿದ. ಮುಳುಗಡೆ ಪ್ರದೇಶದಲ್ಲಿ 200 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿ, ಭತ್ತ ಬೆಳೆಯಲು ನೀರಾವರಿ ಮಾಡಿದ. ಸುತ್ತಲಿನ ಜಮೀನನ್ನು ಗದ್ದೆಗಳಾಗಿ ಪರಿವರ್ತಿಸಿದ್ದರಿಂದ ಕರಿನೆಲ್ಲು ಭತ್ತದ ಕಣಜವಾಗಿ ರೂಪುಗೊಂಡಿತು. ಡುಗ್ಗನೆಲ್ಲು ಎಂದೂ ಕರೆಸಿಕೊಳ್ಳುತ್ತಿದ್ದ ಕರಿನೆಲ್ಲು ಮಲ್ಲಿಗೆಗಿಂತ ಸುವಾಸನೆ ಬೀರುತ್ತಿದ್ದರಿಂದ ಈ ಪ್ರದೇಶದಲ್ಲಿ ಪಾರಂಪರಿಕ ಭತ್ತದ ತಳಿಯಾಗಿ ಬೆಳೆಯಲ್ಪಡುತ್ತಿತ್ತು. ಆಡು ಭಾಷೆಯಲ್ಲಿ ಇದನ್ನು ಮಮದಾಪುರ ನೆಲ್ಲು ಎಂದೂ ಕರೆಯುತ್ತಾರೆ.
80ರ ದಶಕದಲ್ಲಿ ರಾಜ್ಯದಲ್ಲಿ ಭೀಕರ ಬರ ಬಿದ್ದಾಗ ಈ ವಿಶಿಷ್ಟ ಸ್ವಾದ ಹಾಗೂ ಔಷಧೀಯ ಗುಣಹೊಂದಿದ್ದ ಡಿಗ್ಗನೆಲ್ಲು ಜಿಲ್ಲೆಯಿಂದ ಮಾಯವಾಗಿತ್ತು. ಆದರೆ 3 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಈ ಬೀಜ ಬೆಳೆಯುವುದನ್ನು ಕಂಡ ಸ್ಥಳೀಯರಾದ ಕೃಷ್ಣಾ ಬಿ. ಕುಲಕರ್ಣಿ ಅವರು ಈ ಬೀಜ ಸಂರಕ್ಷಿಸಿ, ಮಮದಾಪುರ ಸುತ್ತಲಿನ ರೈತರಿಂದ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಮಮದಾಪುರದ ಚಂದ್ರಕಾಂತ ಪಾಟೀಲ ಈ ವಿಷಯದಲ್ಲಿ ವಿಶೇಷ ಸಂಶೋಧನೆಯನ್ನೂ ನಡೆಸಿದ್ದಾರೆ.
ಇದಲ್ಲದೇ ಜಿಲ್ಲೆಯಲ್ಲಿ ಕಡಿಮೆ ಮಳೆ ಇಲ್ವೇ ಬರ ಖಾತ್ರಿ ಎಂಬ ಕಾರಣಕ್ಕೆ ಕಡಿಮೆ ತೇವಾಂಶದಲ್ಲೂ ಉತ್ತಮ ಇಳುವರಿ ಕೊಡುವ ಅಣ್ಣಿಗೇರಿ ಕುಸುಬಿ, ಅತ್ಯುತ್ಕೃಷ್ಟ ಸ್ವಾದದ ಪೌಷ್ಟಿಕತೆ ಹೊದಿರುವ ಖೈರಗೋದಿ ಜಿಲ್ಲೆಯ ರೈತರ ಬದುಕಿನಲ್ಲಿ ಇನ್ನೂ ಆಧುನಿಕ ಬೀಜದ ಭರಾಟೆಗೆ ಸಿಲುಕದೆ ಬದುಕಿವೆ. ಬಿಳಿತೊಗರಿ, ನವಣಿ, ಬರಗು ಜಿಲ್ಲೆಯ ಆಸ್ಮಿತೆಯ ತಳಿಗಳ ಬೆಳೆಗಳಿಗೆ ಜಿಲ್ಲೆಯ ಆಚೆಗೂ ಭಾರಿ ಬೇಡಿಕೆ ಇದೆ. ನಮ್ಮ ರೈತರು ಸರ್ಕಾರದ ನಿರ್ದೇಶನ, ಯೋಜನೆ, ಸಹಾಯ, ನೆರವು ಇಲ್ಲದೇ ಪಾರಂಪರಿಕವಾಗಿ ಇನ್ನೂ ಸ್ಥಳೀಯ ಹಾಗೂ ದೇಶಿ ಬೀಜಗಳನ್ನೇ ಬೆಳೆಯುತ್ತಲೇ ಬರುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ರೈತರು ಬೆಳೆಯುವ ಹಾಗೂ ಗ್ರಾಹಕರು ಸೇವಿಸುವ ತರಕಾರಿಗಳಲ್ಲಿ ಜವಾರಿಯದ್ದೇ ಸಿಂಹಪಾಲು. ಹೀಗಾಗಿ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಆದಲ್ಲಿ ಇಲ್ಲಿನ ಮಣ್ಣು, ನೀರು, ವಾತಾರಣದಲ್ಲಿ ಸಮೃದ್ಧವಾಗಿ ಬೆಳೆಯುವ ಹಾಗೂ ಬೆಳೆಯುತ್ತಿದ್ದ ದೇಶಿ ಬೀಜಗಳ ಸಂರಕ್ಷಣೆ ಸಾಧ್ಯ ಎಂಬುದು ರೈತರ ಆಗ್ರಹ.
ಭೀಕರ ಬರದ ಹಿನ್ನೆಲೆಯಲ್ಲಿ ಮೂರು ದಶಕದಿಂದ ಜಿಲ್ಲೆಯಿಂದ ಮಾಯವಾಗಿದ್ದ ಡುಗ್ಗನೆಲ್ಲು ಬೀಜ ಬೆಳಗಾವಿಯಲ್ಲಿ ಅ ಧಿಕವಾಗಿ ಬೆಳೆಯಲ್ಪಡುತ್ತಿದೆ. ಈ ಬೀಜವನ್ನು ಅಲ್ಲಿಂದ ತಂದು ಇಲ್ಲಿನ ರೈತರಿಗೆ ನೀಡಿದ್ದು, ಸರ್ಕಾರದ ನೆರವಿಲ್ಲದೇ ಸಂರಕ್ಷಣೆ ಮಾಡುತ್ತಿದ್ದೇವೆ. ಮಾಜಿ ಸಚಿವ ಎಂ.ಬಿ.ಪಾಟೀಲ ಅವರು ನೀರಾವರಿ ಮಾಡಿದಲ್ಲದೇ ಈ ಔಷಧ ಗುಣವಿರುವ ವಿಶಿಷ್ಟ ಸುವಾಸನೆ ಕರಿನೆಲ್ಲು ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾದಲ್ಲಿ ಇಂತಹ ದೇಶಿ ಬೀಜಗಳಿಗೆ ವಿದೇಶಿ ಮಾರುಕಟ್ಟೆ ಕಲ್ಪಿಸಲು ಸಾಧ್ಯವಿದೆ.
ಕೃಷ್ಣಾಜೀ ಕುಲಕರ್ಣಿ, ಡುಗ್ಗನೆಲ್ಲು ಬೀಜ ಸಂರಕ್ಷಕರು ಮಮದಾಪುರ
ಕೊಂಕಣ ರಾಜ್ಯದಿಂದ ಆದಿಲ್ ಶಾಹಿ ಅಸರ ಆಪ್ತನಾಗಿದ್ದ ಮುರಾರೆಪ್ಪ ಎಂಬುವರಿಂದ ಜಿಲ್ಲೆಗೆ ಬಂದ ಡುಗ್ಗನೆಲ್ಲು ಎಂದು ಕರೆಸಿಕೊಳ್ಳುತ್ತಿದ್ದ ಕರಿನೆಲ್ಲಿನ ಸುವಾಸನೆ ಭರಿತ ಅನ್ನದ ಸ್ವಾದವೇ ವಿಶಿಷ್ಟ. ಈ ಸುವಾಸನೆ ಮತ್ಯಾವ ಧಾನ್ಯದಿಂದಲೂ ಬರಲು ಸಾಧ್ಯವಿಲ್ಲ. ಇದರ ಸಂರಕ್ಷಣೆ ಇಂದಿಗೂ ನಡೆಯುತ್ತಿದೆ.
ಚಂದ್ರಕಾಂತ ಪಾಟೀಲ,
ಸಂಶೋಧಕರು, ಮಮದಾಪುರ.
ಜಿಲ್ಲೆಯಲ್ಲಿ ಈಗಲೂ ಬಹುತೇಕ ರೈತರು ಬಹುತೇಕ ಬ್ರಿಟಿಷ್ ಕಾಲದ ಸಂಶೋಧನೆಯ ಮಾಲ್ದಂಡಿ ಜೋಳದ ಬೀಜ ಹಾಗೂ ಇತರೆ ದೇಶಿ ಬೀಜಗಳನ್ನೇ ಬೆಳೆಯುತ್ತಿದ್ದಾರೆ. ತಮಗೆ ಅರಿವಿಲ್ಲದಂತೆ ಈ ನೆಲದ ಬೀಜ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದಲ್ಲಿ ಬೀಜ ಸಂರಕ್ಷಣೆಗೆ ಉತ್ತಮವಾಗುತ್ತದೆ.
ಚಂದ್ರಶೇಖರ ಪಾಸೋಡೆ, ಸಾವಯವ
ಪ್ರಗತಿಪರ ರೈತರು, ಸಾಇ.ಶಿರಶ್ಯಾಡ.
*ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್