ಉತ್ತರ ಪ್ರದೇಶ ಸರಕಾರದ ಜತೆ ಒಪ್ಪಂದ; ಎಂಟಿಎಲ್ನಿಂದ ಗ್ರಾಮೀಣ ಭಾಗಕ್ಕೆ ಬ್ಯಾಂಕಿಂಗ್ ಸೇವೆ
ಡಿಜಿಟಲ್ ನಗದು ಸೇವೆ ಮತ್ತು 2.3 ಕೋಟಿ ಜನರಿಗೆ ನಮ್ಮ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆ
Team Udayavani, Feb 22, 2021, 1:10 PM IST
ಮಣಿಪಾಲ, ಫೆ. 21: ಉತ್ತರಪ್ರದೇಶ ರಾಜ್ಯ ಗ್ರಾಮೀಣ ಜನಜೀವನ ಯೋಜನೆಯಡಿ ಬ್ಯಾಂಕಿಂಗ್ ಸೇವೆ ನೀಡಲು ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್ ನಿಯುಕ್ತಿಗೊಂಡಿದ್ದು, ಶುಕ್ರವಾರ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ.
ಉತ್ತರ ಪ್ರದೇಶದ ಗ್ರಾಮೀಣ ಜನಜೀವನ ಯೋಜನೆ (ಯುಪಿಎಸ್ಆರ್ಎಲ್ಎಂ)ಯಡಿ ಸುಮಾರು 8,000 ಗ್ರಾಮೀಣ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಬ್ಯಾಂಕಿಂಗ್ ಏಜೆಂಟರಾಗಿ (ಬ್ಯಾಂಕಿಂಗ್ ಸಖಿ) ಕಾರ್ಯನಿರ್ವಹಿಸಲು ಅನುಕೂಲ ವಾಗುವಂತೆ ಎಂಟಿಎಲ್ ತರಬೇತಿ ನೀಡಲಿದೆ. ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಂಟಿಎಲ್ ಒಪ್ಪಂದಕ್ಕೆ ಸಹಿ
ಹಾಕಿತು ಎಂದು ಕಂಪೆನಿ ತಿಳಿಸಿದೆ.
ಈ ಯೋಜನೆ ಗ್ರಾಮೀಣ ಭಾರತದಲ್ಲಿ ಮನೆ ಮನೆಗೆ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಉದ್ದೇಶ ಹೊಂದಿದ್ದು, ಇದರಡಿ ಉತ್ತರ ಪ್ರದೇಶದ ಎಲ್ಲ 75 ಜಿಲ್ಲೆಗಳ ಗ್ರಾಮಾಂತರ ಭಾಗದ ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ಸುಲಭವಾಗಿ ಕೈಗೆ ಎಟಕುವಂತೆ ಮಾಡಲಾಗುವುದು. ಈ ಮೂಲಕ ಸ್ವ ಸಹಾಯ
ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಆದಾಯ ಹೆಚ್ಚುವುದಲ್ಲದೆ, ಡಿಜಿಟಲ್ ಆರ್ಥಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಈ ಸಂದರ್ಭ ಎಂಟಿಎಲ್ ಉಪಾಧ್ಯಕ್ಷ ರಾಜೇಶ್ ಶೇಟ್ ಮಾತನಾಡಿ, ಉತ್ತರ ಪ್ರದೇಶದ ಗ್ರಾಮೀಣ ಮಹಿಳೆಯರಿಗೆ ಬ್ಯಾಂಕಿಂಗ್ ಸೇವೆ ನೀಡಲು ಹಾಗೂ ತಮ್ಮಲ್ಲಿನ ಔದ್ಯಮಿಕ ಗುಣವನ್ನು ಉತ್ತೇಜಿಸಲು ನಮ್ಮ ಸುಲಲಿತ ಮತ್ತು ಸುಭದ್ರ ತಂತ್ರಜ್ಞಾನ ನೆರವಾಗುತ್ತದೆ. ಗ್ರಾಮೀಣ ಭಾರತದಲ್ಲಿ ಡಿಜಿಟಲ್ ನಗದು ವೃದ್ಧಿಗೆ ಹಾಗೂ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ತಲುಪಲು ಈ ಬ್ಯಾಂಕಿಂಗ್ ಸಖೀಗಳು ಪೂರಕವಾಗಲಿದ್ದಾರೆ ಎಂದರು.
ಎಂಟಿಎಲ್ ಮುಂಚೂಣಿ
ದೇಶದ 90,000ಕ್ಕೂ ಹೆಚ್ಚು ಹಳ್ಳಿಗಳಿಗೆ ಡಿಜಿಟಲ್ ಸೇವೆ ನೀಡುವಲ್ಲಿ ಎಂಟಿಎಲ್ ಮುಂಚೂಣಿಯಲ್ಲಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಡಿಜಿಟಲ್ ನಗದು ಸೇವೆ ಮತ್ತು 2.3 ಕೋಟಿ ಜನರಿಗೆ ನಮ್ಮ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದ್ದು, ಇದರಲ್ಲಿ 8,000 ಸಖಿಯರು ಸೇರಿದಂತರೆ 8.5 ಲಕ್ಷ ವರ್ತಕರು ಭಾಗಿಯಾಗಿದ್ದಾರೆ ಎಂದರು.
ರಾಷ್ಟ್ರೀಯ ಗ್ರಾಮೀಣ ಜನಜೀವನ ಯೋಜನೆ (ಎನ್ಆರ್ಎಲ್ಎಂ) ಅಡಿಯಲ್ಲಿ ಪ್ರತಿಯೊಬ್ಬ ಬ್ಯಾಂಕಿಂಗ್ ಸಖಿಗೆ ಮೊದಲ ಆರು ತಿಂಗಳಲ್ಲಿ 24,000
ರೂ. ನೆರವು ಲಭ್ಯವಾಗಲಿದೆ. ಅವರಿಗೆ ಪಿಒಎಸ್ ಉಪಕರಣದ ಬಳಕೆ, ಕ್ಯಾಷ್ ಬಾಕ್ಸ್ ನಿರ್ವಹಣೆ ಹಾಗೂ ನಕಲಿ ನೋಟಿನ ಪತ್ತೆಯ ಉಪಕರಣ ಬಳಕೆ
ಕುರಿತು ತರಬೇತಿ ನೀಡಲಾಗುವುದು. ಕೋವಿಡ್ ಕಾಲದಲ್ಲಿ ಸಂಪರ್ಕ ರಹಿತ ಸ್ಕ್ಯಾನರ್ನ್ನು ಬಳಸುವ ಮೂಲಕ ಸುರಕ್ಷೆಗೆ ಆದ್ಯತೆ ನೀಡಲಾಗುವುದು
ಎಂದು ತಿಳಿಸಿದರು.