ಬಾಹುಬಲಿ 2ಗೆ ವಿರೋಧ, ಕಟ್ಟಪ್ಪ ಕ್ಷಮೆಗೆ ಪಟ್ಟು;28ರಂದು ಕರ್ನಾಟಕ ಬಂದ್
Team Udayavani, Apr 19, 2017, 3:35 PM IST
ಬೆಂಗಳೂರು: ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಸತ್ಯರಾಜ್ ಕ್ಷಮೆ ಕೇಳುವವರೆಗೂ ರಾಜ್ಯದಲ್ಲಿ ಬಾಹುಬಲಿ 2 ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದಿರುವ ಕನ್ನಡ ಪರ ಸಂಘಟನೆಗಳು ಏಪ್ರಿಲ್ 28ರಂದು ಕರ್ನಾಟಕ ಬಂದ್ ಮಾಡುವುದಾಗಿ ಪುನರುಚ್ಚರಿಸಿವೆ.
ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ನಟ ಸತ್ಯರಾಜ್ ಹುಚ್ಚನ ರೀತಿ ಮಾತನಾಡಿದ್ದಾರೆ. ನಮ್ಮ ಹೋರಾಟ ಏನಿದ್ರೂ ಸತ್ಯರಾಜ್ ವಿರುದ್ಧ ಮಾತ್ರ ಎಂದು ತಿಳಿಸಿದ್ದಾರೆ.
ಏಪ್ರಿಲ್ 28ರಂದು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರಾಲಿ ನಡೆಸಲಾಗುವುದು ಎಂದು ವಾಟಾಳ್ ವಿವರಿಸಿದರು.
ಬಾಹುಬಲಿ ಚಿತ್ರದ ನಿರ್ಮಾಪಕರೇ ವಿತರಣೆ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ವಿತರಣೆ ಹಕ್ಕು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ. ಅದಕ್ಕಾಗಿ ವಿತರಕರಿಗೆ ಧನ್ಯವಾದ ತಿಳಿಸುವುದಾಗಿ ಸಾರಾ ಗೋವಿಂದು ಹೇಳಿದರು.
ಬಾಹುಬಲಿ ಬಿಡುಗಡೆಗೆ ಪರ, ವಿರೋಧ:
ಬಾಹುಬಲಿ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡೋದಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವಾದ, ಪ್ರತಿವಾದ ನಡೆಯುತ್ತಿದೆ. ಅಲ್ಲದೇ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಕೂಡಾ ಬಾಹುಬಲಿ 2 ಚಿತ್ರದ ಬಿಡುಗಡೆಗೆ ಅವಕಾಶ ಕೊಡೋದಿಲ್ಲ ಎಂದು ಹೇಳುವುದು ಸರಿಯಲ್ಲ. ಅಲ್ಲದೇ ಸತ್ಯರಾಜ್ ಅವರು 9 ವರ್ಷಗಳ ಹಿಂದೆ ನೀಡಿರುವ ಹೇಳಿಕೆ ಬಗ್ಗೆ ಈಗ ವಿವಾದ ಎಬ್ಬಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದರು. 9 ವರ್ಷಗಳಲ್ಲಿ ಸತ್ಯರಾಜ್ ಅವರ 30ಕ್ಕೂ ಅಧಿಕ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು, ಬಾಹುಬಲಿ ಮೊದಲ ಭಾಗ ಬಿಡುಗಡೆಯಾದಾಗಲೂ ವಿವಾದವಾಗಿಲ್ಲ, ಆದರೆ ಈಗ ಯಾಕೆ ಎಂದು ರಾಜಮೌಳಿ ತಿಳಿಸಿದ್ದರು.
ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರ ಹಾಗೂ ಬಾಬುಬಲಿ ಪರ ಚರ್ಚೆ ನಡೆಯುತ್ತಿದೆ.