ಮದನ್ ಪಟೇಲ್ ಕಾದಂಬರಿ ಬರೆದಿದ್ದಾರೆ
Team Udayavani, Oct 19, 2017, 3:28 PM IST
ಇದುವರೆಗೂ ಚಿತ್ರಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಮದನ್ ಪಟೇಲ್, ಈಗ ಕಾದಂಬರಿಕಾರರಾಗಿದ್ದಾರೆ. ಮದನ್ ಪಟೇಲ್ ಅವರು “ತಮಟೆ’ ಎಂಬ ಕಾದಂಬರಿಯನ್ನು ಬರೆದಿದ್ದು, ಅಕ್ಟೋಬರ್ 25ರ ಭಾನುವಾರದಂದು ಸಂಜೆ ಕಬ್ಬನ್ ಪಾರ್ಕ್ನಲ್ಲಿರುವ ಎನ್.ಜಿ.ಓ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
ಗೃಹ ಸಚಿವ ರಾಮಲಿಂಗಾರೆಡ್ಡಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇನ್ನು ಸಚಿವರಾದ ಡಿ.ಕೆ. ಶಿವಕುಮಾರ್, ಎಚ್.ಎಂ. ರೇವಣ್ಣ ಮುಂತಾದವರು ಹಾಜರಿರಲಿದ್ದಾರೆ. ಮದನ್ ಪಟೇಲ್ ಅವರು ರಾತ್ರೋರಾತ್ರಿ ಕಾದಂಬರಿಕಾರರಾಗಿದ್ದು ಹೇಗೆ ಎಂಬ ಪ್ರಶ್ನೆ ಬೇಡ. ಇದು ರಾತ್ರೋರಾತ್ರಿ ಆಗಿದ್ದಲ್ಲ. ಇದು ಸುಮಾರು ಎರಡು ವರ್ಷಗಳ ಕನಸಂತೆ. ಎರಡು ವರ್ಷಗಳ ಕನಸು ಇದೀಗ ನನಸಾಗುತ್ತಿದೆ.
ಬರವಣಿಗೆಯ ಕೃಷಿಗೆ ನೀರೆರೆಡು ಪೋಷಿಸಿದ್ದು ಕಾದಂಬರಿಕಾರರಾದ ಕುಂ. ವೀರಭದ್ರಪ್ಪ. ಪೋಷಿಸುವುದರ ಜೊತೆಗೆ ಕಾದಂಬರಿಗೆ ಮುನ್ನುಡಿಯನ್ನೂ ಅವರೇ ಬರೆದುಕೊಟ್ಟಿದ್ದಾರೆ. ಇನ್ನು ಬೆನ್ನುಡಿಯನ್ನು ಬರೆದುಕೊಟ್ಟಿರುವುದು ಡಾ. ಸಿದ್ಧಲಿಂಗಯ್ಯ. ಈ ಕಾದಂಬರಿಯಿಂದ ಬರುವ ಆದಾಯವನ್ನು ಅವರು ಸಮೃದ್ಧಿ ಟ್ರಸ್ಟಿಗೆ ಸಮರ್ಪಿಸುತ್ತಿದ್ದಾರೆ. ಪುಸ್ತಕ ಬಿಡುಗಡೆಯ ದಿನ ಪುಸ್ತಕ 75 ರೂಪಾಯಿಗೆ ಸಿಗಲಿದೆ.