ಹೊಸಬರಿಗೆ “ನಿಮ್ಮೆಲ್ಲರ ಆಶೀರ್ವಾದ’ ಇರಲಿ…
ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ ಹೊಸಬರ ಚಿತ್ರ
Team Udayavani, Aug 10, 2020, 10:17 AM IST
ಇತ್ತೀಚೆಗೆ ಅನೇಕ ಚಿತ್ರಗಳು ತಮ್ಮ ಶುದ್ಧ ಕನ್ನಡ ಶೀರ್ಷಿಕೆಯ ಮೂಲಕವೇ ಆಗಾಗ್ಗೆ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಈಗ ಅಂಥದ್ದೇ ಶೀರ್ಷಿಕೆಯ ಮತ್ತೂಂದು ಚಿತ್ರ ನಿಧಾನವಾಗಿ ತನ್ನ ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಿಮ್ಮೆಲ್ಲರ ಆಶೀರ್ವಾದ’.
ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಥಾಹಂದರ ಹೊಂದಿರುವ “ನಿಮ್ಮೆಲ್ಲರ ಆಶೀರ್ವಾದ’ ಚಿತ್ರಕ್ಕೆ ಯುವ ನಿರ್ದೇಶಕ ರವಿಕಿರಣ್ ನಿರ್ದೇಶನ ಮಾಡುತ್ತಿದ್ದಾರೆ. ನವ ನಾಯಕ ಪ್ರತೀಕ್, ಪಾಯಲ್ ರಾಧಾಕೃಷ್ಣ ಈ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರವಿಕಿರಣ್, “ಎಲ್ಲವೂ ಇದ್ದುಕೊಂಡು ತಾನೇನು ಮಾಡಬೇಕೆಂದು ಗೊತ್ತಿಲ್ಲದ ಹುಡುಗನೊಬ್ಬನ ಕಥೆ ಈ ಸಿನಿಮಾದಲ್ಲಿದೆ. ಒಬ್ಬ ಪೊಲೀಸ್ ಅಧಿಕಾರಿಯಾದವನು ತನ್ನ ಕೆಲಸವನ್ನು ಕರ್ತವ್ಯ ಎಂದು ಭಾವಿಸಿದರೆ, ಆ ಕೆಲಸದಲ್ಲಿ, ಅವನಲ್ಲಿ ಏನೇನು ಬದಲಾವಣೆಗಳು ಕಾಣಬಹುದು ಅನ್ನೋದು ಚಿತ್ರದ ಕಥೆಯ ಒಂದೆಳೆ. ಕ್ಲಾಸ್ ಮತ್ತು ಮಾಸ್ ಆಡಿಯನ್ಸ್ ಎರಡೂ ಕೆಟಗೆರಿಗೂ ಕನೆಕ್ಟ್ ಆಗುವಂತೆ ಈ ಸಿನಿಮಾ ಮಾಡಿದ್ದೇವೆ. ಕಳೆದ ವರ್ಷ ಮಧ್ಯ ಭಾಗದಲ್ಲಿ ಶುರುವಾದ ಈ ಸಿನಿಮಾವನ್ನು ಮೂರು ಹಂತಗಳಲ್ಲಿ ಶೂಟಿಂಗ್ ಮಾಡಲಾಗಿದೆ. ನಮ್ಮ ಪ್ಲಾನ್ ಪ್ರಕಾರ ಆಗಿದ್ದರೆ, ಈ ವರ್ಷ ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ದಿಂದಾಗಿ ಕೆಲ ಕಾಲ ಸಿನಿಮಾದ ಚಟುವಟಿಕೆಗಳು ಬಂದ್ ಅಗಿದ್ದರಿಂದ, ರಿಲೀಸ್ ಆಗೋದು ಸ್ವಲ್ಪ ತಡವಾಗ್ತಿದೆ’ ಎನ್ನುತ್ತಾರೆ.
ಸದ್ಯ “ನಿಮ್ಮೆಲ್ಲರ ಆಶೀರ್ವಾದ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಥಿಯೇಟರ್ ಗಳು ತೆರೆಯುತ್ತಿದ್ದಂತೆ, ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು “ನಿಮ್ಮೆಲ್ಲರ ಆಶೀರ್ವಾದ’ ಚಿತ್ರದಲ್ಲಿ ಪ್ರತೀಕ್ ಶೆಟ್ಟಿ, ಪಾಯಲ್ ರಾಧಾಕೃಷ್ಣ ಅವರೊಂದಿಗೆ ದಿನೇಶ್ ಮಂಗಳೂರು, ಗೋವಿಂದೇ ಗೌಡ (ಜಿ.ಜಿ), ಅರವಿಂದ ಬೋಳಾರ್, ಎಂ.ಎನ್ ಲಕ್ಷ್ಮೀದೇವಿ, ಸ್ವಾತಿ ಗುರುದತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಉಡುಪಿ, ಮಲ್ಪೆ, ಪರ್ಕಳ ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಶರವಣನ್ ಜಿ. ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಕಾರ್ಯವಿದೆ. ರೂಪೇಂದ್ರ ಆಚಾರ್ ಕಲಾ ನಿರ್ದೇಶನವಿದೆ. ಸುನಾದ್ ಗೌತಮ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ವರುಣ್ ಸಿನಿ ಕ್ರಿಯೇಷನ್ಸ್’ ಬ್ಯಾನರ್ನಲ್ಲಿ ವರುಣ್ ಹೆಗ್ಡೆ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.