Kannada Cinema; ಫೆ.23ರಂದು ತೆರೆಗೆ ಬರುತ್ತಿದೆ ಪೃಥ್ವಿ ಅಂಬರ್ ನಟನೆಯ ‘ಮತ್ಸ್ಯಗಂಧ’
Team Udayavani, Feb 12, 2024, 5:20 PM IST
ಪೃಥ್ವಿ ಅಂಬರ್ ನಟನೆಯ ” ಮತ್ಸ್ಯಗಂಧ ‘ ಸಿನಿಮಾ ಫೆ.23ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಹಾಡು ಬಿಡುಗಡೆಯಾಗಿ ಹಿಟ್ಲಿಸ್ಟ್ ಸೇರಿದೆ. ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿರುವ ಕಡಲ ಒಡಲ ಮೇಲೆ.. ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೊಗಡು ಭರಿತ ಉತ್ತರ ಕನ್ನಡ ಪರಿಸರ ಸಂಸ್ಕೃತಿ ಹಾಗೂ ಅಲ್ಲಿನ ಬದುಕಿನ ಚಿತ್ರಣವನ್ನ ಹೇಳುವ ಹಾಡು ಇದಾಗಿದೆ.
ಇಲ್ಲಿಯವರೆಗೆ ಕನ್ನಡದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ, ಕಾಲೇಜ್ ಹುಡುಗನಾಗಿ ಮಿಂಚಿದ್ದ ನಟ ಪೃಥ್ವಿ ಅಂಬರ್ ಇದೇ ಮೊದಲ ಬಾರಿಗೆ “ಮತ್ಸ್ಯಗಂಧ’ ಸಿನಿಮಾದಲ್ಲಿ ಖಾಕಿ ತೊಟ್ಟು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
” ಮತ್ಸ್ಯಗಂಧ’ ಸಿನಿಮಾದಲ್ಲಿ ಪೃಥ್ವಿ ಅಂಬರ್ ಅವರೊಂದಿಗೆ ಲೋಕಿ ಸೌರವ್, ಪ್ರಶಾಂತ್ ಸಿದ್ಧಿ, ನಾಗರಾಜ್ ಬೈಂದೂರ್, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಪ್ರಶಾಂತ್ ಸಿದ್ದಿ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಮೊದಲ ಬಾರಿಗೆ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಭಾಗಿರಥಿ’ ಅನ್ನೋ ” ಮತ್ಸ್ಯಗಂಧ ‘ ಸಿನಿಮಾದ ಹಾಡು ಕೂಡ ಕೇಳುಗರನ್ನು ಸೆಳೆಯಲು ಯಶಸ್ವಿಯಾಗಿತ್ತು. ಇದೀಗ ” ಮತ್ಸ್ಯಗಂಧ ‘ ಸಿನಿಮಾದ ಫಸ್ಟ್ಲುಕ್ ಟೀಸರ್ ಕೂಡ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ.
ಕನ್ನಡ ಪಿಚ್ಚರ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಸಹ್ಯಾದ್ರಿ ಪ್ರೊಡಕ್ಷನ್ಸ್ ನಡಿ ಬಿ.ಎಸ್ ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶಿಸಿದ್ದಾರೆ.