ಕಿರುತೆರೆಯಿಂದ ಬೆಳ್ಳಿತೆರೆಗೆ ಸತಿ ಪಯಣ
Team Udayavani, Oct 3, 2018, 11:37 AM IST
ಕಿರುತೆರೆ ಮೂಲಕ ಈಗಾಗಲೇ ಸಾಕಷ್ಟು ನಟಿಯರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ವಿಷಯ ಗೊತ್ತೇ ಇದೆ. ಆ ಸಾಲಿಗೆ “ಸಂಗೀತಾ’ ಹೊಸ ಸೇರ್ಪಡೆ. ಇಲ್ಲಿರುವ ಸುದ್ದಿ ಜೊತೆಗಿನ ಫೋಟೋ ನೋಡಿದರೆ, ಈ ಹುಡುಗಿಯನ್ನು ಎಲ್ಲೋ ನೋಡಿರುವಂತಿದೆಯಲ್ಲಾ ಎಂಬ ಪ್ರಶ್ನೆ ಎದುರಾಗುವುದು ಸಹಜ. ಕಿರುತೆರೆಯ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ “ಹರ ಹರ ಮಹಾದೇವ’ ಧಾರಾವಾಹಿ ನೋಡಿದರೆ, ಈ ಹುಡುಗಿ ನೆನಪಾಗದೇ ಇರದು.
ಹೌದು, ಆ ಧಾರಾವಾಹಿಯಲ್ಲಿ ಸತಿ ಪಾತ್ರ ನಿರ್ವಹಿಸಿದ ಹುಡುಗಿಯೇ ಸಂಗೀತಾ. ಇದೇ ಮೊದಲ ಸಲ ಸಂಗೀತಾ ಗಾಂಧಿನಗರಕ್ಕೆ ಕಾಲಿಟಿದ್ದಾರೆ. “ಎ ಪ್ಲಸ್’ ಚಿತ್ರದ ಮೂಲಕ ತನ್ನ ಮೊದಲ ಇನ್ನಿಂಗ್ಸ್ ಶುರುಮಾಡಿದ್ದಾರೆ. ಅಕ್ಟೋಬರ್ 5 ರಂದು ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರುತ್ತಿದೆ. ಈ ಕುರಿತು “ಉದಯವಾಣಿ’ ಜೊತೆ ಸಂಗೀತಾ ಹೇಳಿಕೊಂಡಿದ್ದು ಹೀಗೆ. “ಇದು ನನ್ನ ಮೊದಲ ಚಿತ್ರ. ನಾನಿಲ್ಲಿ ಯಶಸ್ವಿನಿ ಎಂಬ ಪಾತ್ರ ಮಾಡಿದ್ದೇನೆ.
ಅದೊಂಥರಾ ಕ್ರೇಜಿ ಲವ್ವರ್ ಗರ್ಲ್ ಪಾತ್ರ. ಒಬ್ಬ ನಾಯಕಿ ಎಂಥಾ ಪಾತ್ರ ಬರುಸುತ್ತಾಳ್ಳೋ, ಅಂತಹ ಪಾತ್ರ ನನ್ನ ಮೊದಲ ಚಿತ್ರದಲ್ಲೇ ಸಿಕ್ಕಿದ್ದು ಹೆಮ್ಮೆ ಎನಿಸಿದೆ. ಆ ವಿಷಯದಲ್ಲಿ ನಾನು ಅದೃಷ್ಟವಂತೆ. ಸಾಕಷ್ಟು ಏರಿಳಿತ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಾಲೆಂಜ್ ಆಗಿತ್ತು. ಇನ್ನು, ನಾನು ಕಿರುತೆರೆಯಿಂದ ಇಲ್ಲಿಗೆ ಬಂದವಳು. ಅಲ್ಲಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಧಾರಾವಾಹಿಯ ಚಿತ್ರೀಕರಣ ಕಂಪ್ಲೀಟ್ ಮುಂಬೈನಲ್ಲಿ ನಡೆಯಿತು.
ಒಳಾಂಗಣದಲ್ಲಿ ದೊಡ್ಡ ಸೆಟ್ ಹಾಕಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ನಿತ್ಯವೂ ಚಿತ್ರೀಕರಣ ಜೋರಾಗಿರುತ್ತಿತ್ತು. ವಾರದ ಬಳಿಕ ತೆರೆ ಮೇಲೆ ಬರುತ್ತಿತ್ತು. ಆದರೆ, ಸಿನಿಮಾ ಆ ರೀತಿ ಅಲ್ಲ. ತಿಂಗಳುಗಟ್ಟಲೆ ಚಿತ್ರೀಕರಣ ನಡೆಸಿ, ಅದಕ್ಕೆ ಪೂರ್ವ ತಯಾರಿ ಮಾಡಿ ಆ ನಂತರ ಪ್ರೇಕ್ಷಕರ ಮುಂದೆ ಬರಬೇಕು. ಹಾಗಾಗಿ ಇಲ್ಲಿ ದೊಡ್ಡ ತಯಾರಿ ಬೇಕು. ನಾನು ಮೂಲತಃ ಭರತನಾಟ್ಯ ಕಲಾವಿದೆ. ಅದರಲ್ಲೂ ಮಾಡೆಲ್ ಕ್ಷೇತ್ರದಲ್ಲಿದ್ದವಳು.
ನಟನೆ ಕಷ್ಟ ಎನಿಸಲಿಲ್ಲ. ಭರತನಾಟ್ಯ ಕಲಾವಿದೆ ಆಗಿದ್ದರಿಂದ ಸತಿ ಪಾತ್ರ ಸುಲಭ ಎನಿಸಿತು’ ಎಂದು ವಿವರ ಕೊಡುತ್ತಾರೆ ಸಂಗೀತಾ. ಸಂಗೀತಾ ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಫೇಸ್ಬುಕ್ ಮೂಲಕವಂತೆ. ಅದನ್ನು ಅವರೇ ವಿವರಿಸುತ್ತಾರೆ. “ನಾನು ಈ “ಎ ಪ್ಲಸ್’ ಚಿತ್ರಕ್ಕೆ ಆಯ್ಕೆಯಾಗಿದ್ದೇ ಫೇಸ್ಬುಕ್ನಿಂದ. ನಿರ್ದೇಶಕ ವಿಜಯ್ ಸೂರ್ಯ ಫೇಸ್ಬುಕ್ ಮೆಸೇಜ್ ಕಳುಹಿಸಿ, ನನ್ನನ್ನು ಭೇಟಿ ಮಾಡಿ ಕಥೆ ಹೇಳಿ ಒಪ್ಪಿಸಿದರು.
ಇದಕ್ಕೂ ಮುನ್ನ ನಾನು ನಾನು ಕೇಳಿದ ಕಥೆಗಳೆಲ್ಲವೂ ಒಂದೇ ರೀತಿಯಾಗಿರುತ್ತಿದ್ದವು. ಹಾಗಾಗಿ ಒಪ್ಪಲಿಲ್ಲ. ಈ ಕಥೆ ಒಪ್ಪೋಕೆ ಕಾರಣ, ಕಥೆ ಮತ್ತು ಪಾತ್ರ. ಎಲ್ಲವೂ ಹೊಸದಾಗಿದ್ದರಿಂದ ಪ್ರತಿಭೆ ತೋರಿಸಲು ಅವಕಾಶವಿದೆ ಅಂತ ಮಾಡಿದ್ದೇನೆ. ನಿರ್ದೇಶಕರು ನನಗೆ ಕ್ಲೈಮ್ಯಾಕ್ಸ್ ಹೇಳಿಲ್ಲ. ಹೀರೋ, ಕ್ಯಾಮೆರಾಮೆನ್ ಮತ್ತು ನಿರ್ದೇಶಕರಿಗಷ್ಟೇ ಕ್ಲೈಮ್ಯಾಕ್ಸ್ ಗೊತ್ತಿದೆ. ನಾನೂ ಸಿನಿಮಾ ನೋಡಲು ತುದಿಗಾಲ ಮೇಲೆ ನಿಂತಿದ್ದೇನೆ.
ಸದ್ಯ ಸಿನಿಮಾದಲ್ಲೇ ಮುಂದುವರೆಯಬೇಕೆಂಬ ಆಸೆ ಇದೆ. ಇನ್ನು ಮುಂದೆ ಧಾರಾವಾಹಿ ಬೇಡ ಎಂದು ನಿರ್ಧರಿಸಿದ್ದೇನೆ’ ಎಂಬುದು ಸಂಗೀತಾ ಮಾತು. ಹಾಗಾದರೆ, ಸಂಗೀತಾ ಎಂತಹ ಪಾತ್ರ ಬಯಸುತ್ತಾರೆ? “ನಾನು ಯಾವುದೇ ಪಾತ್ರ ಸಿಕ್ಕರೂ ಮಾಡಲು ರೆಡಿ. ಮಡಿವಂತಿಕೆ ಬಗ್ಗೆ ಹೇಳುವುದಾದರೆ, ನಾನು ಧಾರಾವಾಹಿ ಮಾಡಿದಾಕ್ಷಣ ಗ್ಲಾಮರಸ್ ಪಾತ್ರ ಮಾಡಲ್ಲ ಅಂತೇನಿಲ್ಲ.
ತೆಲುಗಿನ “ತೇನೆ ಮನಸಲು’ ಎಂಬ ಧಾರಾವಾಹಿಯಲ್ಲೂ ನಟಿಸಿದ್ದೇನೆ. ಗ್ಲಾಮರ್ ಪಾತ್ರಕ್ಕೂ ಸೈ. ಆದರೆ, ಒಳ್ಳೇ ಕಥೆ, ತಂಡ ಇರಬೇಕು ಬೇರೆ ಭಾಷೆಯಿಂದ ಅವಕಾಶ ಬರುತ್ತಿವೆ. ಆದರೆ, ನನಗೆ ಕನ್ನಡವೇ ಕಂಫರ್ಟ್. ಸದ್ಯಕ್ಕೆ “777 ಚಾರ್ಲಿ’ ಚಿತ್ರ ಕೈಯಲ್ಲಿದೆ. ಇನ್ನೊಂದು ಹೊಸ ಚಿತ್ರ ಒಪ್ಪಿದ್ದೇನೆ. ಎಸ್.ಮಹೇಂದ್ರ ಅವರ ನಿರ್ದೇಶನದ ಚಿತ್ರವದು. ಸದ್ಯಕ್ಕೆ ಶೀರ್ಷಿಕೆ ಇಟ್ಟಿಲ್ಲ. ಅದೊಂದು ಕಾಲೇಜ್ ಬೇಸ್ಡ್ ಸ್ಟೋರಿ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಸಂಗೀತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ