Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್
Team Udayavani, Apr 7, 2024, 11:12 AM IST
ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟ ಕಿರಣ್ ರಾಜ್ ಈಗ ಹಿರಿತೆರೆಯಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದಾರೆ. ಅದು “ಭರ್ಜರಿ ಗಂಡು’ ಮೂಲಕ. ಈ ವಾರ ತೆರೆಕಂಡಿರುವ “ಭರ್ಜರಿ ಗಂಡು’ ಸಿನಿಮಾದಲ್ಲಿ ಕಿರಣ್ ರಾಜ್ ಆ್ಯಕ್ಷನ್ ಹೀರೋ ಆಗಿ ಮಿಂಚಿದ್ದಾರೆ. ಚಿತ್ರದ ಬಗ್ಗೆ ಹೇಳಬೇಕಾದರೆ ಇದು ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥೆ. ನೀರಿನ ಅಭಾವದಿಂದ ತತ್ತರಿಸಿ ಹೋಗಿರುವ ಹಳ್ಳಿ ಒಂದು ಕಡೆಯಾದರೆ, ಆ ಹಳ್ಳಿಗೆ ಸಖತ್ ಕಲರ್ಫುಲ್ ಆಗಿ ಎಂಟ್ರಿಕೊಡುವ ನಾಯಕ. ಈ ನಡುವೆಯೇ ಅಲ್ಲಿ ನಡೆಯುವ ಕೊಲೆ, ನಾಯಕನ ಪ್ರೇಮಪುರಾಣ ಮೂಲಕ ಸಿನಿಮಾ ಸಾಗುತ್ತದೆ.
ಚಿತ್ರದಲ್ಲಿ ಹಳ್ಳಿ ಜೊತೆಗೆ ನಾಯಕನ ಸಿಟಿ, ಕಾಲೇಜು ಹಿನ್ನೆಲೆಯನ್ನು ತೋರಿಸಲಾಗಿದೆ. ನಿರ್ದೇಶಕ ಪ್ರಸಿದ್ಧ್ ಅವರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ಕಟ್ಟಿಕೊಡಬೇಕೆಂಬ ಆಸೆ. ಅದೇ ಕಾರಣದಿಂದ ಸಿನಿಮಾದಲ್ಲಿ ಭರ್ಜರಿಯಾದ ಫೈಟ್, ಡೈಲಾಗ್ ಸೇರಿದಂತೆ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನಿರಬೇಕಿತ್ತೋ, ಅವೆಲ್ಲವೂ ಇದೆ. ನಿರೂಪಣೆಯಲ್ಲೂ ನಾಯಕನ ಪಾತ್ರವನ್ನು ವಿಜೃಂಭಿಸುವ ಆ ಬಳಿಕ ಕಥೆಯತ್ತ ಸಿನಿಮಾ ವಾಲುತ್ತದೆ. ಸದ್ಯ ಎಲ್ಲಾ ಕಡೆ ತಲೆದೋರಿರುವ ನೀರಿನ ಅಭಾವದ ಕುರಿತಾಗಿಯೂ ಒಂದಷ್ಟು ವಿಚಾರಗಳನ್ನು ಹೇಳಿದ್ದಾರೆ.
ಇನ್ನು, ಚಿತ್ರದಲ್ಲಿ ಅಲ್ಲಲ್ಲಿ ಬರುವ ಟ್ವಿಸ್ಟ್ಗಳು ಈ ಸಿನಿಮಾದ ಪ್ಲಸ್. ಭರ್ಜರಿ ಗಂಡು ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ, ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೆ ಕಥಾಹಂದರ.
ನಾಯಕ ಕಿರಣ್ ರಾಜ್ ಆ್ಯಕ್ಷನ್ ದೃಶ್ಯಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ನಾಯಕಿ ಯಶ ಶಿವಕುಮಾರ್, ರಾಕೇಶ್ ರಾಜ್, ರೋಹಿತ್ ನಾಗೇಶ್ , ಸೌರಭ್ ಕುಲಕರ್ಣಿ ಸೇರಿದಂತೆ ಇತರರು ನಟಿಸಿದ್ದಾರೆ.