ಸಾಮುದಾಯಿಕ ಮಟ್ಟದಲ್ಲಿ ವ್ಯಾಪಿಸಿಲ್ಲ ; ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
Team Udayavani, May 6, 2020, 11:05 PM IST
ದೇಶದಲ್ಲಿ ಇನ್ನೂ ಕೋವಿಡ್ ಸೋಂಕು ಸಮುದಾಯದ ಮಟ್ಟದಲ್ಲಿ ವ್ಯಾಪಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್ ವೈರಸ್ ವಿರುದ್ಧ ಹೋರಾಡುವುದೇನೂ ರಾಕೆಟ್ ವಿಜ್ಞಾನವಲ್ಲ ಎಂಬುದು ನಮಗೆಲ್ಲರಿಗೂ ಈಗ ತಿಳಿಯಿತು. ಈ ಸೋಂಕಿನಿಂದಾಗಿ ಜನರ ನಡವಳಿಕೆಯಲ್ಲೇ ಬದಲಾವಣೆಗಳಾಗಿವೆ.
ಸೋಂಕು ದೂರವಾದ ಬಳಿಕವೂ ಸಾರ್ವಜನಿಕರ ಇಂಥ ನಡವಳಿಕೆಯು ಸಹಜವೆಂಬಂತೆ ಮುಂದುವರಿಯಲಿ ಎಂದೂ ಹರ್ಷವರ್ಧನ್ ಆಶಿಸಿದ್ದಾರೆ. ಕೋವಿಡ್ ಸೋಂಕು ನಿರ್ಮೂಲನೆಯಾದ ಬಳಿಕ ಭಾರತೀಯರು ಹಿಂದಿರುಗಿ ನೋಡಬೇಕು.
ಈ ಸೋಂಕು ನಮ್ಮಲ್ಲಿ ಹೇಗೆ ಕೈಗಳನ್ನು ಸ್ವಚ್ಛಗೊಳಿಸುವ, ಪರಿಸರವನ್ನು ಸ್ವಚ್ಛವಾಗಿಡುವ ಅಭ್ಯಾಸವನ್ನು ಬೆಳೆಸಿಬಿಟ್ಟಿತು ಎಂಬುದನ್ನು ನೆನೆದು ಧನ್ಯವಾದ ಹೇಳಬೇಕು ಎಂದೂ ಅವರು ಹೇಳಿದ್ದಾರೆ.
ನಾವು ದೈನಂದಿನ ಜೀವನದಲ್ಲಿ ಇಂಥ ಸ್ವಚ್ಛತೆಯ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ಅನೇಕ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು. ನಮ್ಮ ದೇಶದಲ್ಲಿ ಸಿಡುಬು ಮತ್ತು ಪೋಲಿಯೋ ಹೊರತುಪಡಿಸಿ ಬೇರೆ ಯಾವ ಸಾಂಕ್ರಾಮಿಕ ರೋಗವೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ.
ಅವುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಪ್ರತಿ ಕಾರ್ಮೋಡದ ನಡುವೆಯೂ ಕೋಲ್ಮಿಂಚು ಇರುವಂತೆ, ಈಗ ಎದುರಾಗಿರುವ ಕೋವಿಡ್ ಸಂಕಷ್ಟವು ನಮಗೆ ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಸಿಕ್ಕ ಅವಕಾಶ ಎಂದು ಭಾವಿಸೋಣ.
ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡು, ಮೇಕ್ ಇನ್ ಇಂಡಿಯಾ ಯೋಜನೆಯಡಿ ವೈದ್ಯಕೀಯ ಸಲಕರಣೆಗಳು ಮತ್ತು ಸುರಕ್ಷಾ ಸಾಧನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸೋಣ ಎಂದೂ ಹರ್ಷವರ್ಧನ್ ಹೇಳಿದ್ದಾರೆ.
ಇದೇ ವೇಳೆ, ಲಾಕ್ ಡೌನ್ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಥಿಕತೆ ಎಷ್ಟು ಮುಖ್ಯವೋ ಜನರ ಆರೋಗ್ಯವೂ ಅಷ್ಟೇ ಮುಖ್ಯ. ಸರಕಾರ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.