ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ
Team Udayavani, Mar 26, 2024, 1:08 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ಐತಿಹಾಸಿಕ ಹೋಳಿ ಉತ್ಸವದ ಬಣ್ಣದಾಟಕ್ಕೆ ಸೋಮವಾರ ಚಾಲನೆ ದೊರೆತಿದೆ. ಕಿಲ್ಲಾ ಓಣಿಯ ಮೊದಲ ದಿನದ ರಂಗಿನಾಟದಲ್ಲಿ ಜನತೆ ಮಿಂದೆದ್ದರು. ಸುಡು ಬಿಸಿಲಿನ ನಡುವೇ ಕಿಲ್ಲಾ ಭಾಗದ ಕಾಮನನ್ನ ಮಕ್ಕಳು ಕುಣಿದು ಕುಪ್ಪಳಿಸಿ ಹೋಳಿ ಹಬ್ಬದ ಮೊದಲ ದಿನ ರಂಗದೋಕುಳಿಯಲ್ಲಿ ಸಂಭ್ರಮಿಸಿದರು.
ಕಿಲ್ಲಾ ಭಾಗ ಬಣ್ಣ ಬಣ್ಣದ ಚಿತ್ತಾರದ ಕಲರ್ಪುಲ್ ಆಗಿತ್ತು. ಕಿಲ್ಲಾ ಭಾಗದ ಹೊನ್ನಾಳ ದೇಸಾಯಿರವರ ಮನೆ, ಮರಾಟಾ ಗಲ್ಲಿಗಳಲ್ಲಿ ಹೋಳಿ ತನ್ನ ಮೆರಗು ಕಂಡುಕೊಂಡಿತ್ತು. ವಿದ್ಯಾಗಿರಿ ಕಾಲೇಜ್ ಸರ್ಕಲ್ನಲ್ಲಿ ಹಾಕಿದ ಮಳೆ ತುಂತುರು ಹನಿಯಲ್ಲಿ ಡಿಜೆ ಸೌಂಡ್ಗೆ ಯುವಕ ಯುವತಿಯರ ಸಖತ್ ಡ್ಯಾನ್ಸ್ ಮಾಡಿ ಗಮನ ಸೆಳೆದರು.
ಸೋಮವಾರ ಬೆಳಗ್ಗೆಯಿಂದ ವಿದ್ಯಾಗಿರಿ ಪ್ರದೇಶದಲ್ಲಿ ಕಲರ್ ಕಲರ್ ಬಣ್ಣದಾಟದಲ್ಲಿ ಬಾಲಕಿಯರು ತಮ್ಮ ಗೆಳತಿಯರೊಂದಿಗೆ ಕೂಡಿಕೊಂಡು ವಿದ್ಯಾಗಿರಿಯ ಓಣಿಯಲ್ಲಿ ಯುವತಿಯರಿಗೆ ರಂಗುರಂಗಿನ ಗುಲಾಲ ಎರಚಿ ಸಂಭ್ರಮಿಸಿದರು. ಚಿಣ್ಣರು ಸಹ ಬಣ್ಣದಾಟದಲ್ಲಿ ತೊಡಗಿದರಷ್ಟೇ ಅಲ್ಲದೇ ಮಕ್ಕಳ ಚೇಷ್ಟೆ, ವ್ಯವಿಧ್ಯ ಬಾಷೆಗಳು ನೋಡುಗರನ್ನು ರಂಜಿಸಿದರು. ಬೇಧ-ಬಾವವಿಲ್ಲದೆ ಎಲ್ಲರು ಕೂಡಿಕೊಂಡು ಬಣ್ಣದಾಟದಲ್ಲಿ ತೊಡಗಿದ್ದರು. ಮನೆ ಮುಂದೆ ಇಟ್ಟಿದ್ದ ಬ್ಯಾರಲ್ ನೀರಲ್ಲಿ ವಿವಿಧ ತೆರನಾದ ಬಣ್ಣಗಳನ್ನು ಸಿದ್ಧಪಡಿಸಿ ಒಬ್ಬರಿಗೊಬ್ಬರು ಬಣ್ಣ ಎರಚಿ ಖುಷಿಪಟ್ಟರು.ಚಿಣ್ಣರ ಹಲಗೆ ನಾದದೊಂದಿಗೆ ಹಜ್ಜೆಯನ್ನು ತಾಳಕ್ಕೆ ತಕ್ಕಂತೆ ಹಾಕುತ್ತಾ ಕುಣಿದಾಡಿದರು.
ಟ್ರ್ಯಾಕ್ಟರ್ಗಳ ಅಬ್ಬರ (ಬಣ್ಣದ ಬಂಡಿಗಳು ಮಾಯ):
ಕಿಲ್ಲಾ ಭಾಗದ ಮೊದಲ ದಿನದ ಬಣ್ಣದಾಟದ ವಿವಿಧ ಪ್ರದೇಶಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಲ್ಲಿ ಯುವಕರು ಮಾಡಿದ ಬಣ್ಣದ ಬ್ಯಾರಲ್ ಇಟ್ಟುಕೊಂಡು ಕಿಲ್ಲಾದ ಕೊತ್ತಲೇಶ ದೇವಸ್ಥಾನದ ಮಾರ್ಗವಾಗಿ ಸಾಗಿ, ಬಣ್ಣದ ಟ್ರ್ಯಾಕ್ಟರ್ ಪಂಖಾಮಸೀದಿ, ಮಾಬುಸುಬಾನಿ ದರ್ಗಾ, ಜೈನಪೇಟೆ, ಕುಂಬಾರಮಡು, ಅಡತ ಬಜಾರ ಚಿನಗೇರಕಟ್ಟಿ, ಪಶು ಆಸ್ಪತ್ರೆ ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ ರಸ್ತೆ, ಮೂಲಕ ವಲ್ಲಭಭಾಯಿ ಚೌಕಕ್ಕೆ ಬಂದು ಸಮಾರೋಪಗೊಂಡಿತು. ರಸ್ತೆ ಮಾರ್ಗದುದ್ದಕ್ಕೂ ರಸ್ತೆ ಇಕ್ಕೆಲುಗಳಲ್ಲಿ ಯುವಕರು-ಮಕ್ಕಳು ಇಟ್ಟಿದ್ದ ಬಣ್ಣದ ನೀರಿನ ಬ್ಯಾರಲ್ಗಳನ್ನು ಒಬ್ಬರಿಗೊಬ್ಬರು ಎರಚುತ್ತಿದ್ದರು. ಬಣ್ಣದ ಬಂಡಿಗಳ ಸಾಲಿನ ಮುಂದೆ ಕಿಲ್ಲಾ ಭಾಗದ ತುರಾಯಿ ಹಲಗೆ ತನ್ನ ಸಪ್ಪಳ ಮಾಡುತ್ತಿತ್ತು. ಯುವಕರು ಮಕ್ಕಳು ಬಣ್ಣದ ಟ್ರ್ಯಾಕ್ಟರ್ಗಳಲ್ಲಿ ಕೇಕೆ, ಚಪ್ಪಾಳೆ, ಆರ್ಸಿಬಿ ಸೇರಿದಂತೆ ವಿವಿಧ ಘೋಷಣೆಗಳು ಮುಗಿಲು ಮಟ್ಟಿದವು.