ಬಾಗಲಕೋಟೆ: ಮಾರಾಟಗಾರರ ಸಮ್ಮೇಳನ- ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ
ರೈತ ಸಾಕಷ್ಟು ಶ್ರಮವಹಿಸಿ ಬೆಳೆ ಬೆಳೆಯುತ್ತಾರೆ
Team Udayavani, Feb 29, 2024, 2:20 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ಕಷ್ಟಪಟ್ಟು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಲು ರೈತರು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ತೋಟಗಾರಿಕೆ ಇಲಾಖೆ ಮತ್ತು ಕ್ಯಾಪೆಕ್
ಜಂಟಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಖರೀದಿದಾರರ ಹಾಗೂ ಮಾರಾಟಗಾರರ ನಡುವಿನ ಅಂತರ ದೂರವಿತ್ತು. ಇದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಮಧ್ಯವರ್ತಿಗಳು ಕಡಿಮೆ ಬೆಳೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುತ್ತಿರಲಿಲ್ಲ ಎಂದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಇದೆ.
ಉತ್ತಮ ಹವಾಮಾನ, ನೀರು ಇದ್ದು, ಉತ್ತಮ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಆದರೆ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆಯ ಕೌಶಲ್ಯತೆ ಕೊರತೆ. ರೈತ ಸಾಕಷ್ಟು ಶ್ರಮವಹಿಸಿ ಬೆಳೆ ಬೆಳೆಯುತ್ತಾರೆ. ಅದನ್ನು ಮಾರುಕಟ್ಟೆಗೆ ತರಲು ಮಾರುಕಟ್ಟೆಯ ಕೌಶಲ್ಯತೆ ಅರಿವು ಅಗತ್ಯವಾಗಿದೆ. ರೈತರನ್ನು ಖಾಸಗಿ ಮಾರುಕಟ್ಟೆಗೆ ಸಂಪರ್ಕ ಮಾಡಿದಾಗ ಮಾತ್ರ ಉತ್ತಮ ಮಾರುಕಟ್ಟೆಯ ಮೌಲ್ಯ ಪಡೆಯಲು ಸಾಧ್ಯ ಎಂದು ಹೇಳಿದರು.
ಜಿಪಂ ಸಿಇಒ ಶಶಿಧರ ಕುರೇರ, ಬೆಂಗಳೂರಿನ ಲಾಲ್ಬಾಗ್ನ ಅಪರ ನಿರ್ದೇಶಕ ಡಾ| ಪಿ.ಎಂ.ಸೊಬರದ ಮಾತನಾಡಿದರು. ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ- ಮಾರಾಟ ಹಮ್ಮಿಕೊಳ್ಳಲಾಗಿತ್ತು. ಸಂಸದ ಪಿ.ಸಿ.ಗದ್ದಿಗೌಡರ, ಅಧಿಕಾರಿಗಳು
ಉತ್ಪನ್ನಗಳನ್ನು ವೀಕ್ಷಿಸಿದರು. ವಿವಿಯ ಡೀನ್ ಡಾ| ಲಕ್ಷ್ಮಿ ನಾರಾಯಣ ಹೆಗಡೆ, ಕ್ಯಾಪೆಕ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್. ಬಂಥನಾಳ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನವರ, ಉಪ ನಿರ್ದೇಶಕ ರವೀಂದ್ರ ಹಕಾಟೆ ಹಾಜರಿದ್ದರು.