ಸೋಲು-ಗೆಲುವು ಸಮನಾಗಿ ಸ್ವೀಕರಿಸಿ
Team Udayavani, Sep 16, 2018, 3:42 PM IST
ತೇರದಾಳ: ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಕ್ರೀಡಾಪಟು ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಪ್ರಸಕ್ತ ಸಾಲಿನ ಬೆಳಗಾವಿ ವಿಭಾಗ ಮಟ್ಟದ 14-17 ವರ್ಷದೊಳಗಿನ ಪ್ರಾಥಮಿಕ, ಪ್ರೌಢಶಾಲೆಗಳ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆರೋಗ್ಯಪೂರ್ಣ ಸಮಾಜಕ್ಕೆ ಪ್ರತಿಯೊಬ್ಬರೂ ಕ್ರೀಡಾಭಿಮಾನಿಗಳಾಗಿ, ಕ್ರೀಡೆಗಳ ಆಯೋಜನೆಗೆ ಮುಂದಾಗುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು. ಸಿದ್ಧೇಶ್ವರ ವಿದ್ಯಾವರ್ಧಕ ಸಂಘದವರು ಕ್ರೀಡೆಗಳ ಆಯೋಜನೆಗೆ ಮುಂದಾಗಿರುವುದು ಹೆಮ್ಮೆಯ ವಿಷಯ ಎಂದರು.
ಜಮಖಂಡಿ ತಾಪಂ ಅಧ್ಯಕ್ಷೆ ನಾಗವ್ವ ಕುರಣಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯೆ ಲಲಿತಾ ನಂದೆಪ್ಪನವರ ಪಂದ್ಯಾವಳಿ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ.ಆರ್. ದೇಸ್ತೋಟ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೀಳಾ ಕುಲಕರ್ಣಿ, ಸಂಘದ ಚೇರ್ ಮನ್ ರಮೇಶ ಅವರಾದಿ, ಪ್ರವೀಣ ನಾಡಗೌಡ, ಪ್ರಭಾಕರ ಬಾಗಿ, ಶಾಲೆಯ ಚೇರ್ಮನ್ ಅಪ್ಪು ಮಂಗಸೂಳಿ, ಸರ್ ಎಂ.ವಿ. ವಿಜ್ಞಾನ ಕಾಲೇಜಿನ ಚೇರ್ಮನ್ ಶಂಕರ ಹೊಸಮನಿ, ಐ.ಐ. ಯಾದವಾಡ, ಪರಪ್ಪ ಅಥಣಿ, ಮಹಾಂತೇಶ ಪಂಚಾಕ್ಷರಿ, ಶಂಕರ ಮಂಗಸೂಳಿ, ಈಶ್ವರ ಕಿತ್ತೂರ, ಸಿ.ಎಸ್. ಬಿಜ್ಜರಗಿ, ಪ್ರಾಚಾರ್ಯ ಕೆ.ಎಸ್. ಹುಬ್ಬಳ್ಳಿ, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಬಾಗೆನವರ ಇದ್ದರು.
ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಸಿಬಿಎಸ್ಸಿ ಶಾಲೆ ಮಕ್ಕಳು ಪ್ರಾರ್ಥನಾ ಗೀತೆಗೆ ಹೆಜ್ಜೆ ಹಾಕಿದರು. ಬಾಲಕಿಯರು ನಾಡಗೀತೆ ಹೇಳಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ಜಿ. ತೆಲಬಕ್ಕನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಮರಡಿ ನಿರೂಪಿಸಿದರು. ಎಸ್.ಬಿ. ಬೆಳ್ಳಿಕಟ್ಟಿ ವಂದಿಸಿದರು.
ಕ್ರೀಡಾಜಾಥಾ ಮೆರವಣಿಗೆ: ಬೆಳಗ್ಗೆ 8ರಿಂದ ಕ್ರೀಡಾಪಟುಗಳೊಂದಿಗೆ ಅಲ್ಲಮಪ್ರಭು ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಕ್ರೀಡಾ ಜಾಥಾ ನಡೆಯಿತು. ಶಾಸಕ ಸಿದ್ದು ಸವದಿ ಕ್ರೀಡಾ ಜಾಥಾಕ್ಕೆ ಚಾಲನೆ ನೀಡಿದರು. ಗದಗ, ಶಿರಸಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಒಟ್ಟು 9 ಜಿಲ್ಲೆಗಳಿಂದ ಬಾಲಕರ ಹಾಗೂ ಬಾಲಕಿಯರ ಸೇರಿದಂತೆ ಒಟ್ಟು 36 ತಂಡಗಳು ಜಾಥಾ, ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.