Rabkavi Banhatti; ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ
Team Udayavani, Aug 19, 2023, 6:34 PM IST
ರಬಕವಿ-ಬನಹಟ್ಟಿ: ಬನಹಟ್ಟಿ ಸಮೀಪದ ತೋಟದ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಇರುವುದರಿಂದ ರೈತರು ಬೆಳೆದ ಕಬ್ಬು,ಅರಿಶಿನ ಬೆಳೆ ಸೇರಿದಂತೆ ಎಲ್ಲ ಬೆಳೆಗಳು ಒಣಗುತ್ತಿವೆ. ಈಗ ಕೊಡುತ್ತಿರುವ ಸಿಂಗಲ್ ಫೇಸ್ ಮತ್ತು ತ್ರೀಫೇಸ್ ವಿದ್ಯುತ್ ಪೂರೈಕೆಯಲ್ಲಿ ಅರ್ಧಕ್ಕಿಂತ ಕಡಿಮೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ರೈತ ಮುಖಂಡ ಈಶ್ವರ ಬಿರಾದಾರಪಾಟೀಲ ತಿಳಿಸಿದರು.
ಶನಿವಾರ ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮಾತನಾಡಿದರು.
ಈ ಮೊದಲು ದಿನ ನಿತ್ಯ ಸಂಜೆ 6 ರಿಂದ ಬೆಳಗಿನ 6 ವರೆಗೆ ಸಿಂಗಲ್ ಫೇಸ್ ಮತ್ತು ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದರು. ಆದರೆ ಈಗ ಮೂರು ಗಂಟೆಗಳ ಕಾಲ ಸಿಂಗಲ್ ಫೇಸ್ ಮತ್ತು 4 ಗಂಟೆಗಳ ಕಾಲ ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ಧಾರೆ. ಆದರೆ ಮತ್ತೆ ಮಧ್ಯದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ಆಡುತ್ತದೆ. ರಾತ್ರಿ ಹೊತ್ತು ಸರಿಯಾದ ವಿದ್ಯುತ್ ಪೂರೈಕೆ ಇಲ್ಲದೆ ಇರುವುದರಿಂದ ತೋಟದ ಪ್ರದೇಶದಲ್ಲಿಯ ದನ ಕರುಗಳು, ಮೇಕೆ, ಆಡುಗಳ ಹಾಗೂ ಕೃಷಿ ಉಪಕರಣಗಳ ಕಳ್ಳತನ ಹೆಚ್ಚಾಗಿದೆ. ವಿದ್ಯಾರ್ಥಿಗಳ ಓದಿಗೆ ಬಹು ದೊಡ್ಡ ಸಮಸ್ಯೆಯಾಗಿದೆ ರಾತ್ರಿಯ ಸಮಯವನ್ನು ಕತ್ತಲೆಯಲ್ಲಿ ಕಳೆಯುವಂತಾಗಿದೆ ಎಂದು ಭೀಮಶಿ ಪಾಟೀಲ ತಿಳಿಸಿದರು.
ರೈತರು ಹೆಸ್ಕಾಂ ಅಧಿಕಾರಿಗಳಾದ ಎಸ್.ಜಿ.ಕಲಕಂಬ, ಗಿರೀಶ ಗೊಂದಳಿ, ಸಿದ್ದು ಮಹೇಷವಾಡಗಿ ಮತ್ತು ಪಿ.ಬಿ. ಸತ್ತಿಯವರ ಜೊತೆಗೆ ಚರ್ಚಿಸಿದರು.
ಮುಂದಿನ ದಿನಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಹೋದರೆ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ರೈತರು ತಿಳಿಸಿದರು.
ಭೀಮಶಿ ಹಂದಿಗುಂದ, ಬಸವರಾಜ ಬೆಳಗಲಿ, ರುದ್ರಪ್ಪ ಹಂದಿಗುಂದ, ರಾಮಪ್ಪ ಪಾಟೀಲ, ಮಹಾಂತೇಶ ಮಿಳ್ಳಿ, ಶೇಖರ ಜಿಡ್ಡಿಮನಿ, ಮುದಕಪ್ಪ ಜಿಡ್ಡಿಮನಿ, ಪೆಂಡಾರಿ ಸೇರಿದಂತೆ ಅನೇಕ ರೈತರು ಇದ್ದರು.
ಸರ್ಕಾರ ಆದೇಶದಂತೆ ರೈತರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಬೆಳಕಿನ ಸಲುವಾಗಿ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿದ್ದ ಈ ಸಂದರ್ಭದಲ್ಲಿ ಪಂಪ್ ಸೆಟ್ ಗಳನ್ನು ಆರಂಭಿಸುವುದರಿಂದ ಕಚೇರಿಯಲ್ಲಿ ತೊಂದರೆಯಾಗುತ್ತಿರುವುದರಿಂದ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಗ್ರಾಮೀಣಾ ವಿಭಾಗದ ಹೆಸ್ಕಾಂ ಅಧಿಕಾರಿ ಎಸ್.ಜಿ.ಕಲಕಂಬ ತಿಳಿಸಿದರು.