ಸರಣಿಗಳ್ಳತನ: ನಗದು, ಒಡವೆ ದೋಚಿ ಪರಾರಿ; ಬೆಚ್ಚಿ ಬಿದ್ದ ಜನತೆ
Team Udayavani, Jul 16, 2023, 7:43 PM IST
ರಬಕವಿ-ಬನಹಟ್ಟಿ : ರಬಕವಿ ನಗರದ ವಿದ್ಯಾನಗರ ಬಡಾವಣೆಯ ವಿವಿಧೆಡೆ ಸರಣಿಗಳ್ಳತನ ನಡೆಸಿರುವ ಕಳ್ಳರು ನಗದು, ಬಂಗಾರ ಒಡವೆ ದೋಚಿ ಪರಾರಿಯಾದ ಘಟನೆ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿಯಲ್ಲಿ ನಡೆದಿದೆ.
ರಬಕವಿಯ ವಿದ್ಯಾನಗರದ 8 ನೇ ಕ್ರಾಸ್ನಲ್ಲಿನ ಚನ್ನಪ್ಪ ಮುಂಡಗನೂರ ಹಾಗು ಚಿದಾನಂದ ಉಪ್ಪಾರ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಒಟ್ಟು 50 ಸಾವಿರ ನಗದು ಹಾಗು 7.5 ಗ್ರಾಂ ಬಂಗಾರ ಕಳ್ಳತನವಾಗಿರುವದು ದಾಖಲೆಯಾಗಿದೆ.
ಈ ಪ್ರಕರಣವು ಜುಲೈ.13 ಗುರುವಾರದಂದು ರಾತ್ರಿ 10ರ ನಂತರ ಜುಲೈ.14 ರ ಬೆಳಗಿನ ಜಾವ 7 ಗಂಟೆ ನಡುವಿನ ಸಮಯದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಏಳೆಂಟು ಮನೆಗಳಿಗೆ ಕಣ್ಣ: ಇಬ್ಬರು ಯುವಕರಿಂದ ನಡೆದ ಸರಣಿಗಳ್ಳತನವು ಸುಮಾರು ಏಳೆಂಟು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿರುವದರ ಬಗ್ಗೆ ಸ್ಥಳೀಯರಿಂದ ತಿಳಿದು ಬಂದಿದೆ.
ಕೀಲಿ ಹಾಕಿದ ಮನೆಗಳೇ ಟಾರ್ಗೆಟ್: ವಿದ್ಯಾ ನಗರ ಬಡಾವಣೆಯಲ್ಲಿ ಮಧ್ಯಮ ವರ್ಗ ಹಾಗು ಶ್ರೀಮಂತರೇ ಹೆಚ್ಚು ವಾಸಿಸುವ ಪ್ರದೇಶವಾಗಿದ್ದು, ಹೆಚ್ಚಿನ ಕುಟುಂಬಗಳು ರಬಕವಿಯ ಊರಿನೊಳಗೂ ಮನೆಗಳಿವೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಮನೆಗಳು ಕೀಲಿ ಹಾಕಿದ್ದೇ ಇರುತ್ತವೆ. ಇದೆಲ್ಲವನ್ನೂ ಹಗಲು ಹೊತ್ತು ಗಮನಿಸಿದ ಕಳ್ಳರು ರಾತ್ರಿ ಹೊತ್ತು ತಮ್ಮ ಕೈಚಳಕ ತೋರಿಸಿದ್ದಾರೆ.
ಇನ್ನೂ ಕೆಲ ಮನೆ ಮಾಲಿಕರು ಊರಲಿಲ್ಲ. ಹೀಗಾಗಿ ಎಷ್ಟು ಕಳ್ಳತನವಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೆಟ್ಟಿ ನೀಡಿದ ತೇರದಾಳ ಪಿಎಸ್ಐ ಅಪ್ಪಣ್ಣ ಐಗಳಿ ಸ್ಥಳ ಪರಿಶೀಲನೆ ನಡೆಸಿ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ನಡೆಸಿದರು.
ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂಥದ್ದೇ ಪ್ರಕರಣ ಬೀಳಗಿಯಲ್ಲಿಯೂ ನಡೆದಿದೆ. ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ಸುಳಿವು ದೊರೆತಿದೆ. ಶೀಘ್ರವೇ ಬಂಧಿಸಲಾಗುವದು. ಸಾರ್ವಜನಿಕರು ಊರಿಗೆ ತೆರಳುವಾಗ ಪೊಲೀಸ್ ಠಾಣೆ ಗಮನಕ್ಕೆ ತನ್ನಿ. ಗಲ್ಲಿ ಅಥವಾ ಮನೆ ಮುಂದೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿಕೊಂಡರೆ ಸೂಕ್ತ.’
-ಐ. ಎಂ. ಮಠಪತಿ, ಸಿಪಿಐ, ಬನಹಟ್ಟಿ