ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ
Team Udayavani, Feb 12, 2021, 1:37 PM IST
ಕುಳಗೇರಿ ಕ್ರಾಸ್: ನಾನು ಮುಖ್ಯಮಂತ್ರಿ ಇದ್ದಾಗ ಒಂದು ದಿನ ದುಡ್ಡು ಕಡಿಮೆ ಇರಲಿಲ್ಲ. ಆದರೆ, ಈಗಿನ ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಮಾಜಿ ಸಿಎಂ ಶಾಸಕ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ಗೋವನಕೊಪ್ಪ ಗ್ರಾಮದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಪ್ರವಾಹದಿಂದ ಹಾನಿಯಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೊರೊನಾ ನೆಪ ಹೇಳುತ್ತಿದ್ದು, ಈ ಬಾರಿ ಹೆಚ್ಚುವರಿ 35 ಸಾವಿರ ಕೋಟಿ ಸಾಲ ಪಡೆಯುತ್ತಿದ್ದಾರೆ ಎಂದರು.
ನಾನು ಸಿಎಂ ಇದ್ದಾಗ ಶಾಲೆ ಕಾಲೇಜಿಗೆ ಬಿಡುಗಡೆ ಮಾಡಿದ ಅನುದಾನ ಕೇಳಿದರೆ ಹಣ ಇಲ್ಲ ಎನ್ನುತ್ತಿದ್ದು, ಸರ್ಕಾರದ ಪಂಚೇಂದ್ರಿಯಗಳು ಕೆಲಸವನ್ನೇ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಎರಡು ವರ್ಷದ ನಂತರ ನಾವೇ ಅಧಿ ಕಾರಕ್ಕೆ ಬರುತ್ತೇವೆ. ಗೋವನಕೊಪ್ಪ ದೊಡ್ಡ ಗ್ರಾಮ. ಇದು ಗ್ರಾಪಂ ಆಗಬೇಕು. ಸರ್ಕಾರಕ್ಕೆ ಪತ್ರ ಬರೆದು ನನ್ನ ಪೆನ್ನಿನ ಇಂಕ್ ಖಾಲಿಯಾಗಿದೆ. ದೊಡ್ಡ ಊರಿದೆ. ಆದರೂ ಜನಸಂಖ್ಯೆ ಕಡಿಮೆ ಇದೆ ಎನ್ನುತ್ತಿದ್ದಾರೆ. ಈಗ ಮತ್ತೂಂದು ಗ್ರಾಮ ಸೇರಿಸುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಗೋವನಕೊಪ್ಪ ಗ್ರಾಪಂ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ :ಪ್ರಥಮ ದರ್ಜೆ ಕಾಲೇಜು ಮಂಜೂರಿಗೆ ಯತ್ನ
ಬಾದಾಮಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಇಇ ಶಿವಾನಂದ ಜಾಡರ ಅವರನ್ನು ತರಾಟೆಗೆ ತೆಗೆದುಕೊಂಡು, ಕಾಮಗಾರಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಿದರು. ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ನರಗುಂದ ಮಾಜಿ ಶಾಸಕ ಬಿ.ಆರ್. ಯಾವಗಲ್, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ಎಂ.ಡಿ. ಎಲಿಗಾರ, ಮಹೇಶ ಹೊಸಗೌಡ್ರ, ಭೀಮಸೇನ ಚಿಮ್ಮನಕಟ್ಟಿ, ಹೊಳಬಸು ಶೆಟ್ಟರ, ಪಿ.ಆರ್. ಗೌಡರ, ಪ್ರಕಾಶಗೌಡ ತಿರಕನಗೌಡ್ರ, ಬಸವರಾಜ ಬ್ಯಾಹಟ್ಟಿ, ರಾಮಣ್ಣ ಡೊಳ್ಳಿನ, ಗ್ರಾಪಂ ಅಧ್ಯಕ್ಷ ಬಸವರಾಜ ಕಟ್ಟಿಕಾರ, ಮುದಕಣ್ಣ ಹೆರಕಲ್, ಮುರಳಿ ಎಡನ್ನವರ, ಹನಮಂತಗೌಡ ಪಾಟೀಲ, ರಂಗನಗೌಡ ಪಾಟೀಲ ಇತರರು ಇದ್ದರು.