“ಮೀಸಲಾತಿಗೆ ಹೋರಾಟ-ಪ್ರತಿಭಟನೆ ಅನಿವಾರ್ಯ’ ಶಾಸಕ ಡಾ|ವೀರಣ್ಣ
ಶ್ರೀಗಳು ಆಶೀರ್ವಚನ ನೀಡಿ, ಲಿಂಗಾಯತ ಸಮಾಜ ಮಹಾ ವೃಕ್ಷವಾಗಿದೆ
Team Udayavani, Jan 2, 2023, 5:05 PM IST
ಹುನಗುಂದ: ಎಲ್ಲ ಸಮಾಜದ ಮಕ್ಕಳಿಗೂ ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಬಲರಾಗಲು ಮತ್ತು ಸರ್ಕಾರಿ ಉದ್ಯೋಗ ಪಡೆಯಲು ಮೀಸಲಾತಿಗೆ ಸರ್ಕಾರಗಳ ವಿರುದ್ಧ ಹೋರಾಟ ಮತ್ತು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು.
ಬಸವ ಮಂಟಪದಲ್ಲಿ ರವಿವಾರ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬಣಜಿಗರ ಸಮಾವೇಶ, ಅಕ್ಕಮಹಾದೇವಿ ನಾಮಫಲಕ ಉದ್ಘಾಟನೆ, ಸಾಧಕರಿಗೆ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸರ್ಕಾರ ಈಗಾಗಲೇ ಕೆಲವು ಲಿಂಗಾಯತ ಉಪ ಜಾತಿಗಳಿಗೆ ಶೈಕ್ಷಣಿಕ ಮೀಸಲಾತಿ ನೀಡಿದೆ.
ಅದರಂತೆಯೇ ಉದ್ಯೋಗ ಮೀಸಲಾತಿ ಕೇಳುವುದು ಅನಿವಾರ್ಯ. ಈ ವಿಷಯವಾಗಿ ಚುನಾವಣೆ ಬಂದಾಗ ಪ್ರತಿ ಜಾತಿಗಳು ನಡೆಸುವ ಸಮ್ಮೇಳನದ ಪ್ರಭಾವದಿಂದ ಮತ್ತೂಂದು ಸಣ್ಣ ಸಮಾಜ ಛಿದ್ರವಾಗುವ ರೀತಿಯಲ್ಲಿ ಹೋರಾಟ ನಡೆಯಬಾರದು ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೆ ಸಮಾಜ ಅಭಿವೃದ್ಧಿ ಕಾರ್ಯ ಮಾಡುವಾಗ ಜನಪ್ರತಿನಿಧಿಗಳು ಅಸೂಯೆ ಬಿಡಬೇಕು. ನಮ್ಮ ಕಲಾದಷ್ಟು ಸಹಾಯ ಮಾಡಲು ಪ್ರಯತ್ನಿಸಬೇಕು. ಛಿದ್ರವಾಗುವ ಸಮಾಜ ಒಂದುಗೂಡಿಲು ಪ್ರಯತ್ನಿಸಬೇಕು ಎಂದರು.
ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಆಶೀರ್ವಚನ ನೀಡಿ, ಲಿಂಗಾಯತ ಸಮಾಜ ಮಹಾ ವೃಕ್ಷವಾಗಿದೆ. ಅದರ ಸುತ್ತ ಉಪ ಜಾತಿಗಳೆಂಬ ಟೊಂಗೆಗಳಿವೆ. ಅಂತಹ ಮಹಾ ವೃಕ್ಷಕ್ಕಿದ್ದ ಟೊಂಗೆಗಳು (ಉಪ ಜಾತಿಗಳು) ಉದುರಿದರೆ ವೃಕ್ಷಕ್ಕೆ ಬೆಲೆ ಇಲ್ಲದಂತಾಗುತ್ತದೆ. ಉಪ ಜಾತಿಗಳಿಗೆ ಸಿಗುವ ಸೌಲಭ್ಯ ಪಡೆಯಲು ಹೋರಾಟ, ಪ್ರತಿಭಟನೆ ಮಾಡೋಣ. ಆದರೆ ಮಹಾವೃಕ್ಷ ಲಿಂಗಾಯತ ಪದ ಕಡ್ಡಾಯವಾಗಿ ಬಳಸೋಣ ಎಂದರು.ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮಹಾಂತೇಶ ಮಮದಾಪುರ ಮಾತನಾಡಿದರು.ಶಾಸಕ ದೊಡಡ್ಡನಗೌಡ ಪಾಟೀಲ ಬಸವ ಭಾವಚಿತ್ರಕ್ಕೆ, ಎಸ್ಆರ್ಎನ್ಇ ಫೌಂಡೇಶನ್ ಅಧ್ಯಕ್ಷ
ಎಸ್.ಆರ್. ನವಲಿಹಿರೇಮಠ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಡಾ| ಶಿವಗಂಗಾ ರಂಜಣಗಿ ಉಪನ್ಯಾಸ ನೀಡಿದರು.
ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಂದ ಅನಾವರಣಗೊಂಡ ಅಕ್ಕಮಹಾದೇವಿ ತರಕಾರಿ ಮಾರುಕಟ್ಟೆ ನಾಮಫಲಕದಿಂದ ಬಣಜಿಗ ಸಮಾವೇಶದ ಮೆರವಣಿಗೆ ಬಸ್ ನಿಲ್ದಾಣ, ಮಹಾಂತ ವೃತ್ತ, ಚನ್ನಮ್ಮ ವೃತ್ತ ಮಾರ್ಗವಾಗಿ ಬಸವ ಮಂಟಪ ತಲುಪಿತು.
ಈ ವೇಳೆ ಗದುಗಿನ ಮಹಾಂತ ಸ್ವಾಮೀಜಿ, ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಬಡ್ಡಿ, ಎಸ್.ವಿ. ಸಂಕನೂರ, ವೀರಣ್ಣ ಮತ್ತಿಕಟ್ಟಿ, ಅಪ್ಪು ಪಟ್ಟಣಶಟ್ಟಿ, ಅಂದಾನೆಪ್ಪ ಹವಾಲ್ದಾರ, ಶರಣಪ್ಪ ಗುಳೇದ, ಅಂದಾನೆಪ್ಪ ಗುಳೇದ, ಮಲ್ಲನಗೌಡ ಗೌಡರ, ವೀರಣ್ಣ ಚಟ್ಟೇರ, ಸಂಗಣ್ಣ ಚಿನಿವಾಲರ, ಕೊಪ್ಪಳ ಅಪರ ಜಿಲ್ಲಾಧಿ ಕಾರಿ ಸಾವಿತ್ರಿ ಕಡಿ, ಮಹಾರಾಣಿ ತೋಪಲಕಟ್ಟಿ, ಬಸವರಾಜ ಕೆಂದೂರ, ಸಿ.ಎಸ್. ಹೊನವಾಡ, ಎನ್.ವಿ. ಉಪ್ಪಿನ, ಪ್ರಭು ಇದ್ದಲಗಿ, ಗುರುಬಸವ ಕಂಠಿ, ಎಚ್.ಎಸ್. ಬೋಳಿಶಟ್ಟರ ಇತರರಿದ್ದರು. ವಿಮ ಸಂಗೀತ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮುಖಂಡ ಅರುಣ ದುದ್ಗಿ ಸ್ವಾಗತಿಸಿದರು. ಶಿಕ್ಷಕಿ ಕವಿತಾ ರಾಜೂರ ನಿರೂಪಿಸಿದರು. ಸುಜಾತಾ ಮಾಟೂರ ವಂದಿಸಿದರು.