ಮಕ್ಕಳ ಆರೋಗ್ಯದೆಡೆ ಕಾಳಜಿ ಇರಲಿ
Team Udayavani, Jul 7, 2021, 9:39 AM IST
ಮುಧೋಳ: ಕೊರೊನಾ ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಕಾಣಿಸಿಕೊಳ್ಳುವ ಸಂಭವವಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ತಾಲೂಕಿನ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಜರುಗಿದ ತ್ತೈಮಾಸಿಕ ಕೆಡಿಸಿ ಸಭೆಯಲ್ಲಿಮಾತನಾಡಿದ ಅವರು, ಸೋಂಕು ತಡೆಯಲು ಆರೋಗ್ಯ ಇಲಾಖೆ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದೀರಿ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಾಗಿ ಕಾರ್ಯನಿರ್ವಹಿಸಬೇಕು ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಮಲಘಾಣ ಮಾತನಾಡಿ, ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ ಎಂದು ಹೇಳಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಬಸವರಾಜ ಪಾಟೀಲ ಮಾತನಾಡಿ, ಕೊರೊನಾಮೂರನೇ ಅಲೆ ತಡೆಗೆ ಎಲ್ಲ ರೀತಿಯತಯಾರಿ ಮಾಡಿಕೊಳ್ಳುತ್ತಿದ್ದೇವೆ. ವೆಂಟಿಲೇಟರ್, ಐಸಿಯು ಬೆಡ್ ಆಕ್ಸಿಜನ್ ಸೇರಿದಂತೆ ಎಲ್ಲ ವಿಧದ ತಯಾರಿ ನಡೆಸಿದ್ದೇವೆ ಎಂದು ತಿಳಿಸಿದರು.
ಜಲಜೀವನ ಮಿಷನ್ ಯೋಜನೆಯಡಿ ಕೇಂದ್ರದಿಂದತಾಲೂಕಿಗೆ ಬಂದಿರುವ 49.83 ಕೋಟಿ ರೂ.ವನ್ನು ಸದ್ಬಳಕೆ ಮಾಡಿಕೊಂಡು ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದು ಸಂಬಂಧಿಂಸಿದ ಅಧಿಕಾರಿ ಕಿರಣ ಘೋರ್ಪಡೆ ಅವರಿಗೆ ತಿಳಿಸಿದರು. ಬೋರ್ವೆಲ್ನೀರು ಪೂರೈಕೆ ಆದಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಿ ಭೂಮಿಯ ಮೇಲಿನ ನೀರು ಪೂರೈಕೆ ಹೆಚ್ಚು ಒತ್ತು ನೀಡಿ ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿ ತಾಪಂ ಇಒ ಘೋರ್ಪಡೆ ಅಧಿಕಾರಿ ಒಟ್ಟು 43 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ನಗರದಲ್ಲಿ ನೀರಿನ ಸಮಸ್ಯೆ ಹಿಂದಿನಿಂದಲೂ ಇದೆ. ಅದನ್ನು ಮನಗಂಡು 112 ಕೋಟಿ ರೂ.ಗಳ ಬೃಹತ್ ಯೋಜನೆ ಮಂಜೂರು ಮಾಡಿಸಲಾಗಿದೆ. ನಗರಸಭೆ ಆಯುಕ್ತರು ಅಲ್ಲಿಯವರೆಗೂ ನೀರಿನ ಸಮಸ್ಯೆಯನ್ನು ಸರಿದೂಗಿಸುವತ್ತ ಗಮನ ಹರಿಸಬೇಕು. ಎಲ್ಲ ವಾರ್ಡ್ಗಳ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿನಾಕಾರಣ ಕಾಂಕ್ರಿಟ್ ರಸ್ತೆ ಅಗೆಯುವವರ ವಿರುದ್ಧಕೇಸ್ ಹಾಕಿ ಎಂದು ನಗರಸಭೆ ನೂತನ ಆಯುಕ್ತ ಅಂಬಿಗೇರಗೆ ಸೂಚಿಸಿದರು.
ತಾಲೂಕಿನಲ್ಲಿ ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅದರೊಂದಿಗೆ ತೋಟಗಾರಿಕೆ ಬೆಳೆ ಬೆಳೆಯಲು ರೈತರನ್ನು ಪ್ರೇರೇಪಿಸುವಂತೆ ತೋಟಗಾರಿಕೆ ಇಲಖೆಯವರು ಕಾರ್ಯೋನ್ಮುಖರಾಗಬೇಕು. ಇದರಿಂದ ರೈತರ ಆದಾಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಕರೆ ಸ್ವೀಕರಿಸಿ: ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡುವ ವೇಳೆ ಅವರ ಮಾತು ತಡೆದ ಡಿಸಿಎಂ ಕಾರಜೋಳ ಮೊದಲು ನೀವು ಕರೆಸ್ವೀಕರಿಸುವುದನ್ನು ಕಲಿಯಿರಿ. ನಿಮ್ಮಮನಸ್ಸಿಗೆ ಬಂದಂತೆ ವರ್ತಿಸಿದರೆಸಾರ್ವಜನಿಕರಿಗೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಶೌಚಾಲಯ ನಿರ್ಮಾಣಕ್ಕೆ 20 ಸಾವಿರ: ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ನಿರ್ಮಿಸಿಕೊಳ್ಳುವ ಶೌಚಾಲಯದ ಸಹಾಯಧನವನ್ನು 20 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಈ ಮೊದಲು 15 ಸಾವಿರ ಸಹಾಯಧ ನೀಡಲಾಗುತ್ತಿತ್ತು. ಆದರೆ 15 ಸಾವಿರ ರೂ. ಸಾಲದು ಎಂಬ ಮಾತುಗಳು ಕೇಳಿಬಂದಿರುವ ಪರಿಣಾಮ ಮತ್ತೆ 5 ಸಾವಿರ ರೂ.ಗಳನ್ನು ಹೆಚ್ಚಿಸಿ ಒಟ್ಟು 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ಸಂಗಮೇಶ ಬಾಡಗಿ, ತಾಪಂ ಇಒ ಕಿರಣ ಘೋರ್ಪಡೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ ಕೋರಡ್ಡಿ, ಲೋಕೋಪಯೋಗಿ ಇಲಾಖೆ ಎಇಇ ಸೋಮಶೇಖರ ಸಾವನ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ದಂಡನ್ನವರ, ಲೋಕಾಪುರ ಪುರಸಭೆ ಮುಖ್ಯಾಧಿಕಾರಿ ಮಹೇಶ ಪಾಂಡವ ಸೇರಿದಂತೆ ಇತರರು ಇದ್ದರು.