17 ಸಾವಿರ ಮಂದಿ ರಾಜಭವನ ವೀಕ್ಷಣೆ
Team Udayavani, Sep 7, 2018, 12:17 PM IST
ಬೆಂಗಳೂರು: ಇದೇ ಮೊದಲ ಬಾರಿಗೆ ರಾಜಭವನದ ಆಯ್ದ ಕೊಠಡಿಗಳನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಿದ್ದ ಅವಧಿ ಗುರುವಾರ ಮುಕ್ತಾಯವಾಗಿದ್ದು, 17,000ಕ್ಕೂ ಹೆಚ್ಚು ಮಂದಿ ಐತಿಹಾಸಿಕ ಕಟ್ಟಡದ ವೈಭವ, ಸೊಗಸನ್ನು ಕಣ್ಮುಂಬಿಕೊಂಡಿದ್ದಾರೆ.
ಸಾರ್ವಜನಿಕರ ವೀಕ್ಷಣೆಗೆ ಕಡೆಯ ದಿನವಾಗಿದ್ದ ಗುರುವಾರ ರಾಜಭವನದ ಮುಂದೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ಸುಮಾರು 1,700 ಮಂದಿ ಕೊನೆಯ ದಿನ ರಾಜಭವನವದ ಭವ್ಯತೆಯನ್ನು ಕಣ್ಣಾರೆ ಕಂಡು ತೃಪ್ತರಾದರು.
ಮಧ್ಯಾಹ್ನ 4 ಗಂಟೆ ಹೊತ್ತಿಗೆ ಸಾರ್ವಜನಿಕರು ರಾಜಭವನದ ಬಳಿ ಸಾಲುಗಟ್ಟಿ ನಿಂತಿದ್ದರು. ಆರಂಭದಲ್ಲಿ ಚಿಕ್ಕದಾಗಿದ್ದ ಸರತಿ ಸಾಲು ಸಮಯ ಕಳೆದಂತೆ ಬೆಳೆಯುತ್ತಾ ಹೋಯಿತು. ಪುಟ್ಟ ಶಾಲಾ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆಧಾರ್ ಕಾರ್ಡ್ ಹಿಡಿದು ರಾಜಭವನ ಪ್ರವೇಶಿಸಲು ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು.
ರಾಜಭವನ ವೀಕ್ಷಣೆಗೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿತ್ತು. ಹಾಗಾಗಿ ಆಧಾರ್ ಕಾರ್ಡ್ಯಿಲ್ಲದವರು ಒಳ ಪ್ರವೇಶಿಸಲಾರದ ಬೇಸರಗೊಂಡರು. ಸಂಜೆಯಾಗುತ್ತಿದ್ದಂತೆ ಬೆಳಗಿದ ಝಗಮಗಿಸುವ ದೀಪದ ಬೆಳಕಿನಲ್ಲಿ ಕಂಗೊಳಿಸುವ ರಾಜಭವನದ ಸೊಬಗನ್ನು ಕಂಡು ಸಂಭ್ರಮಿಸಿದರು.
ಮನಸೆಳೆದ ಪುಟಾಣಿಗಳು: ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರ ಅಧಿಕೃತ ನಿವಾಸವನ್ನು ಕಣ್ತುಂಬಿಕೊಳ್ಳಲು ನಗರದ ಕಲ್ಕರೆಯ ಶಿಖರ್ ಇಂಟರ್ ನ್ಯಾಷನಲ್ ಶಾಲೆಯ ಸುಮಾರು 40 ವಿದ್ಯಾರ್ಥಿಗಳು ರಾಜಭವನಕ್ಕೆ ಆಗಮಿಸಿದ್ದರು. ಪುಟಾಣಿಗಳು ಐತಿಹಾಸಿಕ ಕಟ್ಟಡ ವೀಕ್ಷಿಸಲು, ಇತಿಹಾಸದ ಪರಿಚಯ ಮಾಡಿಸುವ ಸಲುವಾಗಿ ಶಾಲೆಯು ಮಕ್ಕಳಿಗೆ ಆನ್ಲೈನ್ನಲ್ಲಿ ನೋಂದಣಿ ಮಾಡಿಸಿತ್ತು.
ಈ ವೇಳೆ ಮಾತನಾಡಿದ ಶಿಕ್ಷಕ ಶಿವಣ್ಣ, ರಾಜಭವನಕ್ಕೆ ಅದರದ್ದೇ ಆದಂತಹ ಭವ್ಯ ಪರಂಪರೆ ಇದೆ. ಇದನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಈ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ರಾಜಭವನಕ್ಕೆ ಕರೆದುಕೊಂಡು ಬರಲಾಗಿದೆ ಎಂದು ಹೇಳಿದರು.
ಈ ಸಂಪ್ರದಾಯ ಮುಂದುವರಿಯಲಿ: ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಶತಮಾನಕ್ಕೂ ಹಳೆಯದಾದ ಹಾಗೂ ವಿಶಿಷ್ಟ ವಾಸ್ತುಶಿಲ್ಪ ವಿನ್ಯಾಸ ಹೊಂದಿರುವ ಕಟ್ಟಡವಾದ ರಾಜಭವನದ ಬಗ್ಗೆ ಜನರಲ್ಲಿ ಕುತೂಹಲಗಳಿದ್ದವು. ರಾಜಭವನದ ಆಯ್ದ ಕೊಠಡಿಗಳ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಒಂದಿಷ್ಟು ಸಾರ್ವಜನಿಕ ಕೌತಕ ತಣಿದಂತಾಯಿತು. ರಾಜ್ಯಪಾಲರು ಉತ್ತಮ ಪರಂಪರೆಗೆ ನಾಂದಿ ಹಾಡಿದ್ದು, ಮುಂದುವರಿಯಬೇಕು. ರಾಜಭವನ ಕೇವಲ ಗಣ್ಯರ ಭೇಟಿಗಷ್ಟೇ ಸೀಮಿತವಾಗದೆ ಸಾರ್ವಜನಿಕರ ದರ್ಶನಕ್ಕೂ ಆಗಾಗ್ಗೆ ತೆರೆದುಕೊಳ್ಳಬೇಕು ಎಂಬ ಮಾತು ಕೇಳಿಬಂತು.
ಸುಮಾರು 20 ನಿಮಿಷಗಳ ಕಾಲ ರಾಜಭವನದ ಆವರಣ ಹಾಗೂ ಆಯ್ದ ಕೊಠಡಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ರಾಜಭವನದ ಬಗ್ಗೆ ಮಾಹಿತಿ ನೀಡಲು ಪ್ರವಾಸೋದ್ಯಮ ಇಲಾಖೆಯ 10 ಗೈಡ್ಗಳನ್ನು ನಿಯೋಜಿಸಲಾಗಿತ್ತು. ರಾಜಭವನ ಹೇಗಿರಲಿದೆ ಎಂಬ ಬಗ್ಗೆ ಸಾಕಷ್ಟು ಕೌತುಕ ಇತ್ತು. ಹೀಗಾಗಿ ದೂರದ ಕೊಪ್ಪಳದಿಂದ ವೀಕ್ಷಿಸಲು ಬಂದಿದ್ದೆ. ರಾಜಭವನದ ವೈಭವ ಬೆರಗು ಮೂಡಿಸಿದೆ ಎಂದು ವೀರಯ್ಯ ಹೇಳಿದರು.
ಮಾರ್ಕ್ ಕಬ್ಬನ್ ಅವಧಿಯ ಕಟ್ಟಡ: ನಗರದ ಅತ್ಯಂತ ಎತ್ತರದ ಜಾಗ ಎಂದು ಗುರುತಿಸಿಕೊಂಡಿರುವ ಹೈಗ್ರೌಂಡ್ನಲ್ಲಿನ ಈ ವಿಶಾಲ ಕಟ್ಟಡವು 1840 ಮತ್ತು 1842ರ ಅವಧಿಯಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಅವಧಿಯಲ್ಲಿ ನಿರ್ಮಾಣವಾಗಿತ್ತು. ಕಬ್ಬನ್ ಅವರು 1861ರಲ್ಲಿ ಇಂಗ್ಲೆಂಡ್ಗೆ ಮರಳಿದ ಬಳಿಕ ಈ ಬಂಗಲೆಯನ್ನು ಮಾರಾಟಕ್ಕಿಡಲಾಗಿತ್ತು. ಮಾರ್ಕ್ ಕಬ್ಬನ್ ಉತ್ತರಾಧಿಕಾರಿಯಾಗಿ ಬಂದ ಲೆವಿನ್ ಬೆಂಥಮ್ ಬೌರಿಂಗ್ ಸರ್ಕಾರದ ಅನುದಾನದಿಂದ ಈ ಕಟ್ಟಡ ಖರೀದಿಸಿದರು. ಅಂದಿನಿಂದ ಕಮೀಷನರ್ ಅವರ ಅಧಿಕೃತ ನಿವಾಸವಾಗಿ ಮಾರ್ಪಟ್ಟಿತು.
ರಾಜಭವನದ ಬಗ್ಗೆ ಕೌತುಕ ಇತ್ತು. ಈಗ ರಾಜಭವನಕ್ಕೆ ಭೇಟಿ ನೀಡುವ ಮೂಲಕ ಮನಸಿಗೆ ಖುಷಿ ಕೊಟ್ಟಿದೆ.
-ಮೋನಿಷಾ, ವಿದ್ಯಾರ್ಥಿನಿ ಬಸವೇಶ್ವರ ನಗರ
ಈ ಹಿಂದೆ ವಿ.ಎಸ್.ರಮಾದೇವಿ ಅವರು ರಾಜ್ಯಪಾಲರಾಗಿದ್ದಾಗ ರಾಜಭವನ ಆವರಣ ವೀಕ್ಷಣೆಗೆ ಅವಕಾಶ ನೀಡಿದ್ದರು. ಆಗ ನೋಡಿದ್ದೆ. ಈ ಮತ್ತೆ ಅವಕಾಶ ಕಲ್ಪಿಸಿದ್ದರಿಂದ ಕುಟುಂಬ ಸಮೇತರಾಗಿ ಬಂದು ಪಾರಂಪರಿಕ ಕಟ್ಟಡ ಕಣ್ತುಂಬಿಕೊಂಡಿದ್ದೇವೆ.
-ಕುಮಾರ್. ಕೆ.ಆರ್.ಪುರ ನಿವಾಸಿ
ರಾಜಭವನದ ಬಗೆಗಿನ ಕುತೂಹಲ ತಣಿದಿದೆ. ಬಿಟ್ರಿಷರ ಕಾಲದ ಕಟ್ಟಡ ನೋಡುವುದೇ ಖುಷಿ. ಈ ಅವಕಾಶ ನೀಡಿದ ರಾಜಪಾಲರಿಗೆ ಧನ್ಯವಾದ ಹೇಳುತ್ತೇನೆ.
-ಹರಿಕಿಷನ್, ವಿದ್ಯಾರ್ಥಿ ವಿವೇಕನ ನಗರ
ನಾನು ರಾಜಭವನ ರಸ್ತೆಯಲ್ಲಿ ಹೋಗುವಾಗಲೆಲ್ಲಾ ಒಳಗೆ ಹೇಗಿರಬಹುದು ಎಂಬ ಕುತೂಹಲ ಕಾಡುತ್ತಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದೆ. ಮನಸ್ಸಿಗೂ ಮುದ ನೀಡಿದೆ.
-ಕಿರಣ್, ವಿಜಯನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ