Alcohol consumption: ಮದ್ಯ ಸೇವನೆಗೆ ಹಣ ಕೊಡದ್ದಕ್ಕೆ ವ್ಯಕ್ತಿಗೆ ಇಟ್ಟಿಗೆಯಿಂದ ಹೊಡೆದ!
Team Udayavani, Jan 6, 2024, 11:58 AM IST
ಬೆಂಗಳೂರು: ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ಪುಂಡನೊಬ್ಬ ವ್ಯಕ್ತಿಯ ತಲೆಗೆ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಿರಿನಗರದ ನಿವಾಸಿ ಧರ್ಮ ತಲೆಮರೆಸಿಕೊಂಡಿರುವ ಆರೋಪಿ.
ಸಿಂಗಾರ ವೇಲು (58) ಹಲ್ಲೆಗೊಳಗಾದವ. ಸಿಂಗಾರ ವೇಲು ಡಿ.29ರಂದು ರಾತ್ರಿ 8.30ರಲ್ಲಿ ಮನೆಯ ಸಮೀಪದ ಗಿರಿನಗರ ಠಾಣಾ ವ್ಯಾಪ್ತಿಯ ಮೂಕಾಂಬಿಕಾ ನಗರದಲ್ಲಿರುವ ಫುಟ್ಪಾತ್ ಹೋಟೆಲ್ನಲ್ಲಿ ಊಟ ಮಗಿಸಿ ಮನೆಗೆ ತೆರಳುತ್ತಿದ್ದ. ಆ ವೇಳೆ ಈತನನ್ನು ಅಡ್ಡಗಟ್ಟಿದ್ದ ಆರೋಪಿ ಧರ್ಮ ಮದ್ಯಪಾನಕ್ಕೆ ದುಡ್ಡು ಕೊಡುವಂತೆ ಕೇಳಿಕೊಂಡಿದ್ದ. ನನ್ನ ಬಳಿ ಹಣವಿಲ್ಲ, ಮನೆಗೆ ಹೋಗಲು ಬಿಡು ಎಂದು ಸಿಂಗಾರವೇಲು ಅಲ್ಲಿಂದ ತೆರಳಲು ಮುಂದಾದ. ಇದರಿಂದ ಆಕ್ರೋಶಗೊಂಡ ಆರೋಪಿಯು “ನನಗೆ ದುಡ್ಡು ಕೊಡಲ್ವಾ, ನಾನ್ಯಾರು ಗೊತ್ತಾ ಎಂದು ಹೇಳುತ್ತಾ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಇಟ್ಟಿಗೆಯಿಂದ ಸಿಂಗಾರವೇಲು ತಲೆಗೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಸಿಂಗಾರವೇಲು ಚೀರಾಡಿದ್ದ. ಕಿರುಚಿದರೆ ಸಾಯಿಸುವುದಾಗಿ ಧರ್ಮ ಪ್ರಾಣ ಬೆದರಿಕೆ ಹಾಕಿದ್ದ. ನಂತರ ಸಿಂಗಾರ ವೇಲು ಬಾಯಿಯ ಮೇಲೆಯೂ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ಸಿಂಗಾರವೇಲು ತುಟಿ ಹರಿದು ಗಂಭೀರ ಗಾಯವಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ತಲಾಶ್ ನಡೆಸುತ್ತಿದ್ದಾರೆ. ಇನ್ನು ಹಲ್ಲೆ ನಡಸಿರುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.