ಡಿಸ್ಚಾರ್ಜ್; ಮಾಧ್ಯಮಗಳ ಮೇಲೆ ಅಗ್ನಿ ಶ್ರೀಧರ್ ಕೆಂಡಾಮಂಡಲ
Team Udayavani, Feb 11, 2017, 5:29 PM IST
ಬೆಂಗಳೂರು:ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಪ್ರಕರಣದಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ಗೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಶನಿವಾರ ಅಗ್ನಿ ಶ್ರೀಧರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಸಂದರ್ಭದಲ್ಲಿ ಮಾಧ್ಯಮಗಳ ವಿರುದ್ಧ ಕೆಂಡಾಮಂಡಲರಾದ ಘಟನೆ ನಡೆಯಿತು.
ಇಂದು ಮಧ್ಯಾಹ್ನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಿಂದ ಅಗ್ನಿ ಶ್ರೀಧರ್ ಡಿಸ್ಚಾರ್ಜ್ ಆಗಿ ಹೊರಬರುತ್ತಿದ್ದಂತೆಯೇ ಕ್ಯಾಮರಾಗಳನ್ನು ಕಂಡೊಡನೆಯೇ ನೀವೆಲ್ಲಾ ಯಾರು ಎಂದು ಪ್ರಶ್ನಿಸಿದರು.
ನಾನಿನ್ನೂ ಬದುಕಿದ್ದೇನೆ, ನೀವೆಲ್ಲಾ(ಮಾಧ್ಯಮದವರು) ನಾ ಸತ್ತೇ ಹೋಗಿದ್ದೇನೆ ಎಂಬಂತೆ ಬಿಂಬಿಸಿದ್ದೀರಿ. ನಾಟಕ ಮಾಡಲು ನಾನೇನು ರಾಜಕಾರಣಿ ಅಂದುಕೊಂಡಿದ್ದೀರಾ? ಆಸ್ಪತ್ರೆಯಲ್ಲಿ ನಾನು ಇನ್ನೂ 2 ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗಿತ್ತು. ಆದರೂ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಮೂರು ದಿನಗಳಿಂದ ನಿದ್ದೆ ಮಾಡದೆ, ಹುಚ್ಚನಾಗಿಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ಮಾಧ್ಯಮದವರ ಮೇಲೆ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ನವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಇದು ಐಪಿಸಿ ಸೆಕ್ಷನ್ 307ರ ಪ್ರಕಾರ ಹಲ್ಲೆ, ಆದರೆ ಮಾಧ್ಯಮದವರು ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುದನ್ನು ತೋರಿಸಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.