ಕಲಾಪ ಆರಂಭಕ್ಕೆ ಮುನ್ನ ಎಲ್ಲ ಗುಂಡಿಗೆ ಮುಕ್ತಿ
Team Udayavani, Sep 24, 2018, 12:30 PM IST
ಬೆಂಗಳೂರು: ಸೋಮವಾರ ಕಲಾಪ ಪ್ರಾರಂಭ ಆಗುವುದರೋಳಗಾಗಿ ಬಾಕಿ ಇರುವ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿ, ಅದರ ಸಂಪೂರ್ಣ ಮಾಹಿತಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗವುದು ಎಂದು ಮೇಯರ್ ಆರ್.ಸಂಪತ್ರಾಜ್ ತಿಳಿಸಿದ್ದಾರೆ.
ಹೈಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ರಸ್ತೆ ಗುಂಡಿ ಮುಚ್ಚುತ್ತಿರುವ ಕುರಿತು ಮಾಹಿತಿ ನೀಡಿದ ಅವರು, ಸೆ.20 ರಂದು ಹೈಕೋರ್ಟ್ ರಸ್ತೆ ಗುಂಡಿ ಮುಚ್ಚುವಂತೆ ಖಡಕ್ ಸೂಚನೆ ನಿಡಿದ ಕೂಡಲೇ ಪಾಲಿಕೆ ಎಲ್ಲ ಎಂಟೂ ವಲಯಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭಿಸಿದ್ದು, ಬಹುತೇಕ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ ಎಂದು ಹೇಳಿದರು.
ಹೈಕೋರ್ಟ್ಗೆ ಒಟ್ಟು 2,172 ಗುಂಡಿಗಳು ಬಿದ್ದಿವೆ ಎಂದು ಮಾಹಿತಿ ನೀಡಿದ್ದೆವು. ಆದರ, ಕೆಲವು ವಾರ್ಡ್ಗಳ ರಸ್ತೆಗಳಲ್ಲಿ ಕೊಟ್ಟಿರುವ ಮಾಹಿತಿಗಿಂತಲೂ ಹೆಚ್ಚಿನ ಗುಂಡಿಗಳು ಕಾಣಿಸಿಕೊಂಡಿವೆ. ಹೀಗಾಗಲೇ ಶನಿವಾರ ರಾತ್ರಿ ವೇಳೆಗೆ 1,514 ಗುಂಡಿಗಳನ್ನು ಮುಚ್ಚಲಾಗಿದೆ.
ಇನ್ನು 763 ರಸ್ತೆಗಳನ್ನು ಮಾತ್ರ ಮುಚ್ಚಬೇಕಿದ್ದು, ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಲ್ಲ ವಲಯಗಳಲ್ಲೂ ಇಡೀ ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾರ್ಯಚರಣೆಯಲ್ಲಿ ತೊಡಗಲಿದ್ದಾರೆ. ಭಾನುವಾರ ರಾತ್ರಿ ಪೂರ್ಣ ಕಾರ್ಯಾಚರನೆ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ಒಳಗೆ ಎಲ್ಲ ಗುಂಡಿಗಳನ್ನೂ ಮುಚ್ಚಿ ಸಂಪೂರ್ಣ ಮಾಹಿತಿಯನ್ನು ಹೈಕೋರ್ಟ್ಗೆ ನೀಡಲಾಗುವುದು ಎಂದರು.