ಸಿಎಂ ಹೇಳಿಕೆಗೆ ಬಿಎಸ್ವೈ ಟ್ವೀಟೇಟು
Team Udayavani, Jan 28, 2018, 10:35 AM IST
ಬೆಂಗಳೂರು: ನಾನು ಕನ್ನಡ ನಾಡಿನ ಮಣ್ಣಿನ ಮಗ. ಗುಜರಾತ್ನ ಅಮಿತ್ ಶಾ ಕರ್ನಾಟಕಕ್ಕೆ ಬಂದು ನನ್ನನ್ನು ಬೈದರೆ ರಾಜ್ಯದ ಜನ ಸುಮ್ಮನಿರಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಅವರು ಒಂದು ಟ್ವೀಟ್ನಲ್ಲಿ, ಅಮಿತ್ ಶಾ ಅವರು ಹೊರಗಿನವರು ಎಂದು ಒಡೆದು ಆಳುವ ನೀತಿ ಹೇರಲು ಹೊರಟಿರುವ ಸಿದ್ದರಾಮಯ್ಯನವರಿಗೆ ಒಂದು ಮಾತು ಹೇಳಲಿಚ್ಛಿಸುತ್ತೇನೆ: ಬಿಜೆಪಿ ರಾಷ್ಟ್ರ ನಾಯಕರೆಲ್ಲರೂ ಭಾರತ ಮೂಲದವರೇ ಎಂಬ ಹೆಮ್ಮೆ ನಮ್ಮಲ್ಲಿದೆ ಎಂದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ, ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಬಿಜೆಪಿ ಸರ್ಕಾರ 4 ವರ್ಷದಲ್ಲಿ ನೀಡಿರುವ 8.9 ಕೋಟಿ ರೂ.ನಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಳಸಿದ್ದು 2.4 ಕೋಟಿ ರೂ. ಮಾತ್ರ. ಚುನಾವಣೆ ಹತ್ತಿರ ಬಂದಂತೆ ತಾನು ಮಣ್ಣಿನ ಮಗ ಎಂದರೆ ನಂಬಲು ಕನ್ನಡಿಗರು ತಯಾರಿಲ್ಲ. ನಿಮ್ಮ ಎಲ್ಲ ನಡೆಗಳಿಗೂ ರಾಜ್ಯದ ಜನತೆ ಶೀಘ್ರವೇ ಉತ್ತರಿಸಲಿದ್ದಾರೆಂದು ಹೇಳಿದ್ದಾರೆ.
ಜತೆಗೆ ಸಿದ್ದರಾಮಯ್ಯನವರೇ, ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಸುಳ್ಳು ಹೇಳಿದ ನಿಮ್ಮ ಕನ್ನಡಾಭಿಮಾನದ ಬಗ್ಗೆ ಜನತೆಗೆ ತಿಳಿದಿದೆ. ನಿಮ್ಮ ಸೋನಿಯಾ ಗಾಂಧಿ ಮಹದಾಯಿ ಕುರಿತು ಕರ್ನಾಟಕದ ವಿರುದ್ಧ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ್ದರು. ಕನ್ನಡದ ವೀರಪ್ಪ ಮೊಯ್ಲಿಯವರನ್ನು ನಂಬಬೇಡಿ ಎಂದು ಇಂದಿರಾ ಹೇಳಿದ್ದರೆಂದು ಜನಾರ್ದನ ಪೂಜಾರಿಯವರೇ ಹೇಳಿರುವುದಾಗಿ ಕುಟುಕಿದ್ದಾರೆ.