ತೈಲ ಬೆಲೆ ಇಳಿಕೆ ಕೇಂದ್ರದ ಹೊಣೆ
Team Udayavani, Oct 14, 2017, 11:27 AM IST
ಬೆಂಗಳೂರು: ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತೈಲ ಬೆಲೆ ಇಳಿಕೆ ಕೇಂದ್ರ ಸರ್ಕಾರದ ಜವಾಬ್ದಾರಿಯಾ ಗಿದ್ದು, ಅದರಂತೆ ಅವರೇ ದರ ಇಳಿಕೆ ಮಾಡಬೇಕೆಂದು ಪುನರುಚ್ಚರಿಸಿದ್ದಾರೆ.
ರಾಜ್ಯದ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ಹಲವು ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಶುಕ್ರವಾರ ಕಾಸಿಯಾ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಹಿಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ
ಬ್ಯಾರೆಲ್ಗೆ 120- 130 ಡಾಲರ್ಗೆ ಏರಿಕೆಯಾದರೂ ಜನರಿಗೆ ಹೊರೆಯಾಗದಂತೆ ಪೆಟ್ರೋಲ್ ಬೆಲೆ 68 ರೂ. ಆಸುಪಾಸಿನಲ್ಲಿರುವಂತೆ ನಿಭಾಯಿಸಿದ್ದರು. ಇಂದು ಕಚ್ಚಾತೈಲ ಬೆಲೆ 40ರಿಂದ 45 ಡಾಲರ್ಗೆ ಇಳಿಕೆಯಾದರೂ ಪೆಟ್ರೋಲ್ ದರ ಇನ್ನು 70 ರೂ. ಇರುವುದಕ್ಕೆ ಏನು ಹೇಳುವುದು ಎಂದು ಪ್ರಶ್ನಿಸಿದರು.
ಯಾರ್ರೀ ಅವನು ಮಂತ್ರಿ. ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದರೂ ತೈಲ ಬೆಲೆ ಇಳಿಸದ ಕಾರಣ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂ. ಹಣ ಉಳಿತಾಯವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರಗಳು ತೆರಿಗೆ ಇಳಿಸಲಿ ಎನ್ನುವ ಯಾರ್ರೀ ಅವ್ನು ಕೇಂದ್ರ ಮಂತ್ರಿ ಎಂದು ಸಿದ್ದರಾಮಯ್ಯ ಏಕವಚನದಲ್ಲಿ ಕಿಡಿ ಕಾರಿದರು.
ಕಚ್ಚಾತೈಲ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಕನಿಷ್ಠವೆಂದರೂ ಪೆಟ್ರೋಲ್ ದರ 45 ರೂ.ಗೆ ಇಳಿಕೆಯಾಗಬೇಕಿತ್ತು. ಸಬ್ಸಿಡಿ ಯನ್ನೂ ನೀಡದ ಕೇಂದ್ರ ಸರ್ಕಾರ ಬೆಲೆಯನ್ನೂ ಇಳಿಸು ತ್ತಿಲ್ಲ. ಇಷ್ಟಾದರೂ ಯಾರೊಬ್ಬರೂ ಕೇಳುತ್ತಿಲ್ಲ. ಇದಕ್ಕೆ ಯಾರು ಹೊಣೆ. ಕೈಗಾರಿಕೋದ್ಯಮಿಗಳು ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಜನರಿಗೂ ತಿಳಿಸಬೇಕು ಎಂದರು.
ಹೆದರಿಸಬಹುದೆಂಬ ಅಂಜಿಕೆಯೇ?: ಸತ್ಯವನ್ನು ಹೇಳಲು ನಿಮಗೆ ಆತಂಕವೇ. ತಮ್ಮ ಬಳಿ ಸಿಬಿಐ ಇದೆ, ಇಡಿ ಇದೆ, ಇನ್ಕಂ ಟ್ಯಾಕ್ಸ್ ಇಲಾಖೆ ಇದೆ ಎಂದು ಹೆದರಿಸುತ್ತಾ ರೆಂಬ ಆತಂಕದಿಂದ ನೀವೂ ಮಾತನಾಡಲು ಕಷ್ಟ ವಾಗಬಹುದು. ಕೆಲವೊಮ್ಮೆ ಎಲ್ಲಾ ಗೊತ್ತಿದ್ದರೂ ಸತ್ಯ ಹೇಳಲು ಸಾಧ್ಯವಾಗುವುದಿಲ್ಲ. ನಾನು ಯಾವುದನ್ನೂ ವೈಭವೀಕರಿಸುತ್ತಿಲ್ಲ. ವಸ್ತುಸ್ಥಿತಿ ತಿಳಿಸುತ್ತಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.
ನೋಟು ಅಮಾನ್ಯದಿಂದ ಕಪ್ಪು ಹಣ ಬಿಳಿಯಾಯ್ತು!: ನೋಟು ಅಮಾನ್ಯದಿಂದ ಕಪ್ಪು ಹಣ ಬಿಳಿಯಾಗಿದ್ದು ಹೊರತುಪಡಿಸಿ ಬೇರೇನೂ ಆಗಿಲ್ಲ. ಆರ್ಥಿಕ ಪ್ರಗತಿ ಕಾಣಲಿಲ್ಲ, ಕಪ್ಪುಹಣವಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ, ಷ್ಟಾಚಾರ ಕಡಿಮೆಯಾಗಲಿಲ್ಲ, ಖೋಟಾನೋಟಿನ ಹಾವಳಿ ತಪ್ಪಲಿಲ್ಲ, ಉಗ್ರವಾದ ನಿಯಂತ್ರಣಕ್ಕೆ ಬರಲಿಲ್ಲ. ಕೇಂದ್ರ ಸರ್ಕಾರ ಹೇಳಿದ್ದು ಒಂದೂ ಆಗಲಿಲ್ಲ. ನೋಟು ಅಮಾನ್ಯದಿಂದ ಉತ್ಪಾದನಾ ವಲಯದ ವಹಿವಾಟು ಕುಸಿದಿದ್ದು, ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆಯಾಗಿದ್ದು, ವಸ್ತುಸ್ಥಿತಿಯನ್ನು ಉದ್ಯಮಿಗಳು ಜನತೆಗೆ ತಿಳಿಸ ಬೇಕು ಎಂದು ಹೇಳಿದರು.
ಮುಖ್ಯಮಂತ್ರಿಯಾದ ಆರಂಭದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನನ್ನ ಬಳಿಯೇ ಇದ್ದಾಗ ಕೈಗಾರಿಕೆಗೆ ಉತ್ತೇಜನ ಸಿಗುವುದಿಲ್ಲ ಎಂದು ಅಪಪ್ರಚಾರ ನಡೆದಿತ್ತು. ಆದರೆ ನಾಲ್ಕು ವರ್ಷಗಳಲ್ಲಿ ಕೈಗಾರಿಕೋದ್ಯಮಿಗಳ ಅಭಿಪ್ರಾಯ ಬದಲಾಗಿದೆ. ಉದ್ಯಮ ಸ್ನೇಹಿ ಎಂದು ಸಂಬೋಧಿಸಿ ಅಭಿನಂದಿಸಿರುವುದು ವಸ್ತುಸ್ಥಿತಿ ತಿಳಿಸುತ್ತದೆ ಎಂದು ಹೇಳಿದರು.
ಕೆಲ ರಾಜ್ಯಗಳಿಗೆ ಸಂಕಷ್ಟ ದೇಶಾದ್ಯಂತ ಜಾರಿಯಾದ ಜಿಎಸ್ಟಿಯು ಕೆಲ ರಾಜ್ಯಗಳ ಆರ್ಥಿಕತೆಯ ಮೇಲೆ ತೀವ್ರ ಕೆಟ್ಟ
ಪರಿಣಾಮ ಬೀರಿದೆ. ರಾಜ್ಯದಲ್ಲಿ ಈ ಹಿಂದೆ ವ್ಯಾಟ್ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ತೆರಿಗೆ ಸಂಗ್ರಹ ವ್ಯವಸ್ಥೆ ಕಲ್ಪಿಸಿದ್ದರಿಂದ ಜಿಎಸ್ಟಿ ಜಾರಿ ಬಳಿಕವೂ ರಾಜ್ಯದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಗುಜರಾತ್ನಲ್ಲೂ ಜಿಎಸ್ಟಿಯಿಂದ ಭಾರಿ ಕೆಟ್ಟ ಪರಿಣಾಮ ಬೀರಿದೆ ಎಂಬ ಮಾಹಿತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ