ಹಳ್ಳಿಗಳ ಸೌಂದರ್ಯ ಕಾಪಾಡಲು ಸಚ್ಛ ಶನಿವಾರ
Team Udayavani, Aug 7, 2022, 2:23 PM IST
ಬೆಂಗಳೂರು: ಹಳ್ಳಿಗಳ ಸ್ವಚ್ಛತೆಗೆ ಆದ್ಯತೆ ನೀಡಿರುವ ಬೆಂಗಳೂರು ನಗರ ಜಿಲ್ಲಾಡಳಿತ “ಸ್ವಚ್ಛ ಶನಿವಾರ” ಕಾರ್ಯಕ್ರಮ ರೂಪಿಸಿದೆ. ಊರು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾದ ಹಾಗೆ ಎಂಬ ಪರಿಕಲ್ಪನೆಯಲ್ಲಿ ಪ್ರತಿ ಶನಿವಾರ ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕನಸಿಗೆ ಕೈ ಜೋಡಿಸುವತ್ತ ಹೆಜ್ಜೆಯಿರಿಸಿದೆ.
ಈಗಾಗಲೇ ಬೆಂಗಳೂರು ಪೂರ್ವ ತಾಲೂಕಿನ ಹಳ್ಳಿಗಳಲ್ಲಿ ಪ್ರಾಯೋಗಿಕ ಹಂತದ ಸ್ವಚ್ಛ ಶನಿವಾರ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಪಡೆದುಕೊಂಡಿದೆ. ಇದರಿಂದಾಗಿ ಮತ್ತಷ್ಟು ಪ್ರೇರಿತಗೊಂಡಿರುವ ಜಿಲ್ಲಾಡಳಿತ ಸ್ವಚ್ಛ ಶನಿವಾರ ಕಾರ್ಯಕ್ರಮವನ್ನು ತನ್ನ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯ್ತಿಗಳ ಹಳ್ಳಿಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.
ಸ್ವಚ್ಛ ಶನಿವಾರ ಯೋಜನೆಯಡಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದು ಗ್ರಾಮವನ್ನು ಆಯ್ದು ಕೊಳ್ಳಲಾಗುತ್ತಿದೆ.ಹೀಗೆ ಆಯ್ದುಕೊಂಡ ಗ್ರಾಮಗಳಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ಹಳ್ಳಿಗರು ಜತೆಗೂಡಿ ಸ್ವಯಂ ಪ್ರೇರಿತವಾಗಿ ಸ್ವಚ್ಛತೆಯಲ್ಲಿ ತೊಡಗಿಕೊಳ್ಳಲಿದ್ದಾರೆ.
ನಗರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಆನೇಕಲ್, ಯಲಹಂಕ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಪೂರ್ವ ತಾಲೂಕುಗಳು ಸೇರಿವೆ. ಇದರಲ್ಲಿ 20 ಹೋಬಳಿಗಳಿದ್ದು 588 ಹಳ್ಳಿಗಳಿವೆ. ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾಪಂಗಳು ಇದ್ದು ಈಗಾಗಲೇ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿದೆ.
ಕಾರ್ಯಕ್ರಮ ಎಲ್ಲಿ ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಒಂದೆರಡು ವಾರದ ಮೊದಲೇ ಆಯಾ ಗಾಮ ಪಂಚಾಯ್ತಿಗಳಲ್ಲಿ ಚರ್ಚೆಯಾಗುತ್ತದೆ. ಆ ನಂತರ ಕಾರ್ಯಕ್ರಮ ನಡೆಯಲಿರುವ ಗ್ರಾಮಕ್ಕೆ ಸುತ್ತೋಲೆ ಕಳುಹಿಸಲಾಗುತ್ತದೆ.
11 ಹಳ್ಳಿಗಳಲ್ಲಿ ಸ್ವಚ್ಛ ಶನಿವಾರ ಯಶಸ್ವಿ: ಈಗಾಗಲೇ ಬೆಂಗಳೂರು ಪೂರ್ವ ತಾಲೂಕಿನ 11 ಹಳ್ಳಿಗಳಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮಕ್ಕೆ ಉತ್ತಮ ರೀತಿಯ ಜನ ಸ್ಪಂದನೆ ಸಿಕ್ಕಿದೆ. ಆ ಹಿನ್ನೆಲೆಯಲ್ಲಿ ನಗರ ಜಿಲ್ಲಾಡಳಿತ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಹಳ್ಳಿಗಳ ಸ್ವತ್ಛತೆಯನ್ನು ಕೇಂದ್ರಿ ಕರಿಸಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸ್ವತ್ಛ ಭಾರತ್ ಮಿಷನ್ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಸ್ವಚ್ಛತಾ ಕಾರ್ಯ? :
ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಲ್ಯಾಣಿಗಳು, ಬಸ್ ನಿಲ್ದಾಣ, ಶಾಲೆಗಳ ಆವರಣಗಳು, ಸಾರ್ವಜನಿಕ ಆಟದ ಮೈದಾನಗಳು, ದನಕರುಗಳ ಕುಡಿಯು ನೀರಿನ ಮೂಲ, ಚರಂಡಿಗಳು ಸೇರಿದಂತೆ ಮತ್ತಿತರರ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
ಹಳ್ಳಿಗಳು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾಗಿರುತ್ತದೆ.ಆ ಹಿನ್ನೆಲೆಯಲ್ಲಿ ಹಳ್ಳಿಗಳನ್ನು ಕೇಂದ್ರೀಕರಿಸಿ ಸ್ವಚ್ಛ ಶನಿವಾರ’ ಕಾರ್ಯಕ್ರಮ ರೂಪಿಸಲಾಗಿದೆ. ಸ್ಥಳೀಯ ಜನ ಪ್ರತಿನಿಧಿಗಳು, ಸರ್ಕಾರ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಿಗೇಹಳ್ಳಿ,ಹಳೆ ಹಳ್ಳಿ ಸೇರಿದಂತೆ 11 ಹಳ್ಳಿಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. – ಕೆ.ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ, ಬೆಂಗಳೂರು ಪೂರ್ವ ತಾಲೂಕು
-ದೇವೇಶ ಸೂರಗುಪ್ಪ