CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Team Udayavani, Apr 18, 2024, 10:09 PM IST
ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು? ಬಹುಸಂಖ್ಯಾತರ ಭಾವನೆ ಗೌರವಿಸದ, ರಕ್ಷಣೆ ಕೊಡದ ಇಂತಹ ಸರ್ಕಾರ ಕರ್ನಾಟಕದಲ್ಲಿ ಇರಬಾರದು. ತಕ್ಷಣ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಘಳಿಗೆಯಿಂದಲೂ ತುಷ್ಟೀಕರಣ ರಾಜಕಾರಣ ಪ್ರಭಾವ ನಿತ್ಯ ಕಾಣುವಂತಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಆತಂಕವಾದಿಗಳನ್ನು ಆತಂಕವಾದಿ ಎನ್ನಬಾರದಂತೆ, ಕುಕ್ಕರ್ನಲ್ಲಿ ಬಾಂಬ್ ಒಯ್ಯುವವರನ್ನು ಬ್ರದರ್ಸ್ ಎನ್ನುತ್ತಾರೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ವ್ಯವಹಾರಿಕ ಜಗಳ ಎನ್ನುವುದು, ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುವುದು, ಈಗ ಎಂ.ಎಸ್.ಪಾಳ್ಯದಲ್ಲಿ ರಾಮನವಮಿಯ ದಿನವೇ ಜೈ ಶ್ರೀರಾಮ್ ಘೋಷಣೆ ಕೂಗಬಾರದು ಅಡ್ಡಿಪಡಿಸಿ ಹಲ್ಲೆ ನಡೆಸಲಾಗಿದೆ.
ಇನ್ನೊಬ್ಬರ ಧರ್ಮಪಾಲನೆಯನ್ನೂ ಸಹಿಸಲಾಗದ ಅಸಹಿಷ್ಣು ಮನಸ್ಥಿತಿಗೆ ಕಾಂಗ್ರೆಸ್ ಕುಮ್ಮಕ್ಕೇ ಕಾರಣ. ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದನ್ನು ಅಲ್ಲವೇ ಅಲ್ಲ ಎಂದು ವಾದಿಸಿದ್ದರು, ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿ ಭಾಗಿಯಾದವರನ್ನು ಮಾನವೀಯತೆ ಆಧಾರದ ಮೇಲೆ ಹಿಂಪಡೆಯಬೇಕು ಎಂದು ಕಾಂಗ್ರೆಸ್ಸಿಗರು ಆಗ್ರಹಿಸುತ್ತಾರೆ ಎಂದು ದೂರಿದರು.