Crime News: ಯುವಕನ ಹತ್ಯೆಗೈದ ಇಬ್ಬರ ಸೆರೆ
Team Udayavani, Oct 17, 2023, 12:44 PM IST
ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಮಾರಕಾಸ್ತ್ರಗಳಿಂದ ಯುವಕನ ಹತ್ಯೆಗೈದಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿ ಸುಬ್ಬಯ್ಯನಪಾಳ್ಯದ ರತೀಕ್ ಕುಮಾರ್(31) ಮತ್ತು ಹೆಣ್ಣೂರು ಬಂಡೆ ಭೈರವೇಶ್ವರ ಲೇಔಟ್ನ ಸುಮನ್ (27) ಬಂಧಿತರು.
ಆರೋಪಿಗಳು ಅ.11ರಂದು ಸಂಜೆ 5.30ರ ಸುಮಾರಿಗೆ ಬಾಣಸವಾಡಿಯ ಲಕ್ಷ್ಮಮ್ಮ ಲೇಔಟ್ನಲ್ಲಿ ಮದನ್ ರಿಚರ್ಡ್ (32) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು.
ಕೊಲೆಯಾದ ಮದನ್ ರಿಚರ್ಡ್ ಹಾಗೂ ಆತನ ಸಹಚರರಾದ ಜಾನ್, ಅಚ್ಚು ಹಾಗೂ ಇತರರು 2019ನೇ ಸಾಲಿನಲ್ಲಿ ಆರೋಪಿ ರತೀಕ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಆಕ್ರೋಶಗೊಂಡಿದ್ದ ರತೀಕ್, ಮದನ್ ಮೇಲೆ ಪ್ರತಿಕಾರಕ್ಕಾಗಿ ಕಾಯುತ್ತಿದ್ದ.
ಮತ್ತೂಂದೆಡೆ ಘಟನೆ ಬಳಿಕ ಮದನ್ ತಮಿಳುನಾಡಿನ ಚೆನ್ನೈಗೆ ತೆರಳಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ. ಈ ವಿಚಾರ ತಿಳಿದ ರತೀಕ್, ಪ್ರತಿಕಾರ ತೀರಿಸಿಕೊಳ್ಳಲು ಹೊಂಚು ಹಾಕಿದ್ದ. ಅದರಂತೆ ಅ.11ರಂದು ಸಂಜೆ 5.30ರ ಸುಮಾರಿಗೆ ಮದನ್ ಬಾಣಸವಾಡಿ ಲಕ್ಷ್ಮಮ್ಮ ಲೇಔಟ್ನ 3ನೇ ಕ್ರಾಸ್ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ಆರೋಪಿಗಳು ಮದನ್ ಮೇಲೆ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.