ಬಿಐಎಎಲ್ನಲ್ಲಿ ಸೌರಶಕ್ತಿ ಘಟಕಕ್ಕೆ ಚಾಲನೆ
Team Udayavani, Feb 7, 2019, 8:22 AM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮುಂದಿನ ದಿನಗಳಲ್ಲಿ ನವೀಕರಿಸಿಕೊಳ್ಳಬಹುದಾದ ಇಂಧನಗಳಿಂದಲೇ ಸಂರ್ಪೂಣ ವಿದ್ಯುತ್ ಪಡೆದುಕೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್)ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತರಾಸಿನ ಮೇಲೆ ಸನ್ಶಾಟ್ ಸಂಸ್ಥೆ ನಿರ್ಮಿಸಿರುವ ಸೌರಶಕ್ತಿ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ ಅವರು, ವಿಮಾನ ನಿಲ್ದಾಣದಲ್ಲಿರುವ ಎಂಟು ಕಟ್ಟಡದ ಛಾವಣೆಯ ಮೇಲೆ ಸೌರಫಲಕಗಳನ್ನು ಅಳವಡಿಸಲಾಗಿದ್ದು, ಇದರಿಂದ 3.35 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಒಟ್ಟಾರೆ ಎಲ್ಲಾ ಘಟಕಗಳಿಂದ ವಾರ್ಷಿಕವಾಗಿ 4.7 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಈಗಾಗಲೇ ನಿಲ್ದಾಣದಲ್ಲಿ ಬಳಕೆ ಮಾಡುವ ಶೇ.67 ರಷ್ಟು ವಿದ್ಯುತ್ ಅನ್ನು ಸೌರಶಕ್ತಿ ಮೂಲಕ ನಾವೇ ಉತ್ಪಾದಿಸಿಕೊಳ್ಳುತ್ತಿದ್ದು, ಮುಂದೆ ಶೇ.100ರಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದರು.
ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾದರಿ ವಿಮಾನ ನಿಲ್ದಾಣ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಸೌರ ವಿದ್ಯುತ್ ಘಟಕ ಅಳವಡಿಕೆ ಹಾಗೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ನಿಲ್ದಾಣಕ್ಕೆ ಅಗತ್ಯ ವಿದ್ಯುತ್ ಉತ್ಪಾದನೆ, ಪ್ಲಾಸ್ಟಿಕ್ ಮುಕ್ತ ನಿಲ್ದಾಣ ಹಾಗೂ ಮಳೆ ನೀರು ಕೊಯ್ಲು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಬಿಐಎಎಲ್ನ ಇಂಜಿನಿಯರಿಂಗ್ ಮತ್ತು ನಿರ್ವಹಣೆ ಭಾಗದ ಉಪಾಧ್ಯಕ್ಷ ಎಸ್.ಲಕ್ಷ್ಮೀ ನಾರಾಯಣನ್ ಉಪಸ್ಥಿತರಿದ್ದರು.