ಫ್ಲೆಕ್ಸ್, ಬ್ಯಾನರ್ ಶಾಶ್ವತ ತೆರವಿಗೆ ಹೈ ತಾಕೀತು
Team Udayavani, Aug 2, 2018, 12:28 PM IST
ಬೆಂಗಳೂರು: ಅಧಿಕೃತವೋ, ಅನಧಿಕೃತವೋ ಒಟ್ಟಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಬೆಂಗಳೂರಿನ ಸೌಂದರ್ಯ ಹಾಳಾಗುತ್ತಿದೆ. ಕೇವಲ ತಾತ್ಕಾಲಿಕ ಕ್ರಮಗಳಿಂದ ಈ ಪಿಡುಗು ಹೋಗುವುದಿಲ್ಲ. ಇದಕ್ಕೆ ಶಾಶ್ವತವಾದ ಕಠಿಣ ತೀರ್ಮಾನಗಳ ಅಗತ್ಯವಿದೆ.
ಆದ್ದರಿಂದ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಹಾಕುವ ಮತ್ತು ತೆರವುಗೊಳಿಸುವ ಬಗ್ಗೆ ಒಂದು ನೀತಿ ರೂಪಿಸಿ, ಆ ನೀತಿ ಹೇಗಿರುತ್ತದೆ ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಿ ಎಂದು ಹೈಕೋರ್ಟ್ ಬಿಬಿಎಂಪಿಗೆ ತಾಕೀತು ಮಾಡಿದೆ.
ಬುಧವಾರ ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಫ್ಲೆಕ್ಸ್, ಬ್ಯಾನರ್ಗಳ ಹಾವಳಿ ನಗರಕ್ಕೆ ಅತ್ಯಂತ ತೊಂದರೆದಾಯಕ ವಿಚಾರವಾಗಿದೆ.
ಇಂದು ತೆರವುಗೊಳಿಸಿ, ನಾಳೆ ಮತ್ತೆ ನೇತು ಹಾಕುವುದಲ್ಲ. ಇದಕ್ಕೆ ಶಾಶ್ವತವಾಗಿ ಇತಿಶ್ರೀ ಹಾಡಬೇಕಾಗಿದೆ. ಅದಕ್ಕಾಗಿ ನೀತಿಯೊಂದನ್ನು ರೂಪಿಸಿ ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.
ತಾಕೀತು: ನಗರದಲ್ಲಿ ಅನಧೀಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವ ಸಂಬಂಧ ಬುಧವಾರ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಬುಧವಾರ ಮಧ್ಯಾಹ್ನದೊಳಗೆ ಎಲ್ಲ ಅನಧೀಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ವಿಚಾರಣೆ ವೇಳೆ ಹಾಜರಿದ್ದರು.
ನಗರ ಸೌಂಧರ್ಯದ ಪ್ರಶ್ನೆ: ತಾವು ಅಧೀಕೃತ ಅನುಮತಿ ಪಡೆದ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ದೂರಿಗೆ, ತೆರವು ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಜಾಹಿರಾತುದಾರರ ಪರ ವಕೀಲರು ಮನವಿ ಮಾಡಿದ್ದರು ಎಂದಾಗ, ಅಕ್ರೋಶಗೊಂಡ ನ್ಯಾಯಪೀಠ, ನಿಮ್ಮದು ಅಧಿಕೃತವೋ, ಅನಧೀಕೃತವೋ ನಂತರ ನಿರ್ಧರಿಸೋಣ, ಈಗ ನಮ್ಮ ಮೊದಲು ನಮ್ಮ ಮುಂದಿರುವುದು ಬೆಂಗಳೂರಿನ ಸೌಂದರ್ಯದ ಪ್ರಶ್ನೆ. ಮೊದಲು ಎಲ್ಲ ಫ್ಲೆಕ್ಸ್, ಬ್ಯಾನರ್ಗಳು ತೆರವುಗೊಳ್ಳಲಿ.
ನೀವು ಅಧಿಕೃತವಾಗಿ ಪರವಾನಿಗೆ ಪಡೆದು ಹಾಕಿದ್ದರೆ, ಆಂತಹ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಪುನಃ ಹಾಕುವ ಬಗ್ಗೆ ಬೇಕಿದ್ದರೆ ನಿರ್ಧರಿಸೋಣ ಎಂದು ಹೇಳಿತು. ಅಲ್ಲದೇ ಫ್ಲೆಕ್ಸ್, ಬ್ಯಾನರ್ಗಳ ಬಗ್ಗೆ ನೀತಿ ರೂಪಿಸಿ, ಅದು ಹೇಗಿರುತ್ತದೆ ಎಂಬುದನ್ನು ಮುಂದಿನ ವಿಚಾರಣೆ ವೇಳೆ ತಿಳಿಸಿ ಎಂದು ಪೀಠ ವಿಚಾರಣೆಯನ್ನು ಆ.8ಕ್ಕೆ ಮುಂದೂಡಿತು.
ಬಿಬಿಎಂಪಿ ಮುಚ್ಚಿಬಿಡಿ: ಮಧ್ಯಾಹ್ನದ ವಿಚಾರಣೆಯಲ್ಲಿ ಈವರೆಗೆ 5 ಸಾವಿರ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಹಾಗಾದ್ರೆ ಉಳಿದ ಫ್ಲೆಕ್ಸ್ಗಳನ್ನು ರಾತ್ರಿಯೊಳಗೆ ತೆರವುಗೊಳಿಸುತ್ತೀರಾ ಎಂದು ಪ್ರಶ್ನಿಸಿತು. ಅನಧೀಕೃತ ಫ್ಲೆಕ್ಸ್ಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಕೀಲರು ಸಮಜಾಯಿಷಿ ನೀಡಿದರು.
ವಕೀಲರ ಸಮಜಾಯಿಷಿಯಿಂದ ಸಿಟ್ಟಾದ ಮುಖ್ಯ ನ್ಯಾಯಮೂರ್ತಿಗಳು, ಈ ಕೆಲಸ ನೀವೆ ಮಾಡಲು ಆಗುವುದಿಲ್ಲವೇ, ಇಂತಹ ಸಣ್ಣ ವಿಚಾರಗಳೂ ಕೋರ್ಟ್ಗೆ ಬರಬೇಕೆ, ಕೋರ್ಟ್ ಹೇಳಿದ ಮೇಲೆಯೇ ನೀವು ಕೆಲಸ ಮಾಡಬೇಕಾ, ಬದ್ಧತೆಯಿಂದ ಕೆಲಸ ಮಾಡಲಾಗಿದ್ದರೆ ಬಿಬಿಎಂಪಿ ಯಾಕಿರಬೇಕು, ಅಧಿಕಾರಿ, ಸಿಬ್ಬಂದಿ ಯಾಕೆ ಬೇಕು.ಬಿಬಿಎಂಪಿಯನ್ನು ಮುಚ್ಚಿಬಿಡಿ ಎಂದು ನ್ಯಾಯಪೀಠ ಚಾಟಿ ಬೀಸಿತು.