ರಾಜ್ಯದ ನಾಲ್ವರಿಗೆ “ಯುವ ವಿಜ್ಞಾನಿ ಪ್ರಶಸ್ತಿ’
Team Udayavani, Jul 30, 2018, 6:00 AM IST
ಬೆಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನೀಡುವ 2017-18ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಯ ವಿಜೇತರನ್ನು ಘೋಷಿಸಲಾಗಿದೆ.
ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಸುಹೈಲ್ ಶಿವಮೊಗ್ಗದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಆದಿತ್ಯ ಶಂಕರ್, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕೆ.ರಾಕೇಶ್ಕೃಷ್ಣ ಮತ್ತು ಬೆಂಗಳೂರಿನ ದೊಡ್ಡಬಿದರಕಲ್ಲಿನ ಗುರುಶ್ರೀ ವಿದ್ಯಾಕೇಂದ್ರದ ಅರುಣ್ ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಜ್ಞಾನ ಪರಿಷತ್ತಿನಲ್ಲಿ ಭಾನುವಾರ ನಡೆದ ಯುವವಿಜ್ಞಾನಿಗಳ ಸಮಾವೇಶದಲ್ಲಿ ಯುವ ಸಾಧಕರಿಗೆ ತಲಾ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಪಿ ನಾಗರಾಜ ನೇತೃತ್ವದ ಹಿರಿಯ ವಿಜ್ಞಾನಿಗಳ ತಂಡ ವಿದ್ಯಾರ್ಥಿಗಳಿಗೆ ಹಲವು ರೀತಿಯ ಸ್ಪರ್ಧೆ ನೀಡಿ ಅಂತಿಮವಾಗಿ ನಾಲ್ವರು ಯುವ ವಿಜ್ಞಾನಿಗಳನ್ನು ಆಯ್ಕೆ ಮಾಡಿತು. ಜಿಲ್ಲಾಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಯ್ಕೆಯಾದ 102 ಮಂದಿ ರಾಜ್ಯಮಟ್ಟದಲ್ಲಿ ನಡೆದ ಯುವ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪ್ರಶಸ್ತಿ ಪಡೆದ ಬಗ್ಗೆ ತಮ್ಮ ಖುಷಿ ಹಂಚಿಕೊಂಡ ಯುುವ ವಿಜ್ಞಾನಿಗಳು, ಮುಂದಿನ ದಿನಗಳಲ್ಲಿ ರೈತರಿಗೆ ನೆರವಾಗುವಂತಹ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು. ಅಲ್ಲದೆ, ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಂತಹ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು ಎಂದು ತಿಳಿಸಿದರು.
ವೈಜ್ಞಾನಿಕ ಶಿಬಿರದಲ್ಲಿ ಪಾಲ್ಗೊಳ್ಳಿ: ಇದಕ್ಕೂ ಮೊದಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ
ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ.ಎಂ.ಆರ್. ಎನ್.ಮೂರ್ತಿ, ವೈಜ್ಞಾನಿಕ ಕ್ಷೇತ್ರದ ಬಗ್ಗೆ ಆಸಕ್ತಿ ಇರುವ
ವಿದ್ಯಾರ್ಥಿಗಳು ವಿಜ್ಞಾನ ಕುರಿತ ಶಿಬಿರಗಳಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಇಲ್ಲಿ ವಿಜ್ಞಾನದ ಕುರಿತು ನಡೆಯುವ ಉಪನ್ಯಾಸಗಳನ್ನು ಕೇಳಿ, ಪ್ರಯೋಗ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಥ ಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಬಸವರಾಜು ಮಾತನಾಡಿ, ವೈಜ್ಞಾನಿಕ ಕ್ಷೇತ್ರ ಇಂದು ಬಹಳಷ್ಟು ಮುಂದುವರಿದಿದೆ. ಈ ಹಿಂದೆ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಸರಿಯಾದ ಪರಿಕರಗಳು ದೊರಕುತ್ತಿರಲಿಲ್ಲ. ಆದರೆ, ಈಗ ಅಂಗೈಯಲ್ಲೆ ಎಲ್ಲವೂ ಸಿಗುತ್ತವೆ. ಈ ಹಿನ್ನೆಲೆಯಲ್ಲಿ ರೈತರಿಗೆ ಮತ್ತು ಸಮಾಜಕ್ಕೆ ಒಳಿತಾಗುವ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಸಂಕನೂರ, ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ಬಿ.
ಕಡ್ಲೆàವಾಡ, ಪೌಢಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ಸಿ.ಆರ್. ಮತ್ತಿತರರು ಉಪಸ್ಥಿತರಿದ್ದರು.