ಕನ್ನಡ ಧ್ವಜದಿಂದ ಸಾರ್ವಭೌಮತೆಗೆ ಧಕ್ಕೆ ಇಲ್ಲ: ಸಿದ್ದರಾಮಯ್ಯ
Team Udayavani, Jul 20, 2017, 5:20 AM IST
ಬೆಂಗಳೂರು: ರಾಷ್ಟ್ರಧ್ವಜ ಎತ್ತರದಲ್ಲೇ ಹಾರಾಡುತ್ತದೆ. ಅದರ ಕೆಳಗೆ ರಾಜ್ಯಧ್ವಜ ಹಾರಾಡಲಿದೆ. ಹಾಗಂತ ರಾಷ್ಟ್ರದ ಐಕ್ಯತೆ ಅಥವಾ ಸಾರ್ವಭೌಮತೆಗೆ ಇದರಿಂದ ಯಾವುದೇ ರೀತಿಯಲ್ಲೂ ಧಕ್ಕೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬುಧವಾರ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ಕನ್ನಡಿಗ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು. ಕನ್ನಡ ಧ್ವಜ ರಚನೆಗಾಗಿ ಪಾಟೀಲ ಪುಟ್ಟಪ್ಪ ಮತ್ತು ಕನ್ನಡಪರ ಸಂಘಟನೆಯವರು ಸೇರಿಕೊಂಡು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರ ಆಧಾರದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ವರದಿ ಕೊಟ್ಟ ನಂತರ ಕಾನೂನಿನ ಚೌಕಟ್ಟು ಹಾಗೂ ಸಂವಿಧಾನದ ಅಡಿಯಲ್ಲಿ ಏನು ಮಾಡಬಹುದೋ ಅದನ್ನು ಮಾಡಲಿದ್ದೇವೆ ಎಂದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನೂ ಸಾಧನೆ ಮಾಡಲು ಆಗಿಲ್ಲ ಮತ್ತು ಜನರ ವಿರುದಟಛಿವಾಗಿಯೇ ನಡೆದುಕೊಂಡಿದ್ದರು. ಅದನ್ನೆಲ್ಲ ಈಗ ಪ್ರಸ್ತಾಪ ಮಾಡುವುದಿಲ್ಲ. ಆದರೆ, ಈ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದೆ. ಧ್ವಜ ರಚನೆ ಸಂಬಂಧ ಜೂನ್ 6 ರಂದೇ ಸಮಿತಿ ಮಾಡಿದ್ದೆವು. ಇನ್ನೂ ವರದಿ ಬಂದಿಲ್ಲ. ದೇಶದ ಸಂವಿಧಾನದಲ್ಲಿ ರಾಜ್ಯವೊಂದು ಅದರದ್ದೇ ಆದ ಧ್ವಜ ಹೊಂದಬಾರದು ಎಂದು ಎಲ್ಲೂ ಹೇಳಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗ ನಮ್ಮದೇ ನಾಡಗೀತೆ ಇದೆ. ರಾಷ್ಟ್ರಗೀತೆಯ ಜತೆಗೆ ನಾಡಗೀತೆ ಹಾಡುತ್ತೇವೆ. ಇದರಿಂದ ಯಾವುದಾದರೂ ಸಮಸ್ಯೆ ಆಗುತ್ತಿದೆಯೇ? ಹೀಗಾಗಿ ರಾಷ್ಟ್ರಧ್ವಜಕ್ಕೆ ನೀಡುವಷ್ಟು ಗೌರವ ಕೊಟ್ಟೇ ಕೊಡುತ್ತೇವೆ. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತೇವೆ. ರಾಜ್ಯವೊಂದು ಪ್ರತ್ಯೇಕ ಧ್ವಜ ಹೊಂದಬೇಕು ಅಥವಾ ಬೇಡ ಎಂಬುದನ್ನು ಸಂವಿಧಾನದಲ್ಲಿ ಹೇಳಿಲ್ಲ. ರಾಜಕಾರಣಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ನವರು ವಿರೋಧಿಸುತ್ತಿದ್ದಾರೆ ಎಂದರು