IT Raid: ಸಿಲಿಕಾನ್ ಸಿಟಿಯ ಹಲವೆಡೆ ಐಟಿ ದಾಳಿ
Team Udayavani, Oct 5, 2023, 11:02 AM IST
ಬೆಂಗಳೂರು: ತೆರಿಗೆ ವಂಚನೆ ಆರೋಪದ ಮೇಲೆ ನಗರದ ಚಿನ್ನಾಭರಣ ವ್ಯಾಪಾರಿಗಳು, ಉದ್ಯಮಿಗಳು, ವೈದ್ಯರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಮುಂಜಾನೆಯೇ ವಿಜಯನಗರ, ಶಾಂತಿನಗರ, ಸದಾಶಿವನಗರ, ಜಯನಗರ, ಬಿಟಿಎಂ ಲೇಔಟ್, ಪ್ರಶಾಂತನಗರ ಸೇರಿ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಆರಂಭದಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ದಾಳಿಗೊಳಗಾದ ವ್ಯಕ್ತಿಗಳು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಭದ್ರತೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಜಯನಗರ ಬಳಿಯ ಪ್ರಶಾಂತ ನಗರದಲ್ಲಿ ವೈದ್ಯೆ ಮನೆ, ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ.
ಅರಮನೆ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆ, ಶಾಂತಿನಗರದಲ್ಲಿರುವ ಉದ್ಯಮಿ, ಸದಾಶಿವನಗರದಲ್ಲಿರುವ ಜ್ಯುವೆಲ್ಲರಿ ಶಾಪ್ನ ಮಾಲೀಕರ ಅಪಾರ್ಟ್ಮೆಂಟ್, ಶೇಷಾದ್ರಿಪುರದಲ್ಲಿರುವ ಲೆಕ್ಕಪರಿಶೋಧಕರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ದಾಖಲೆ ಪತ್ರಗಳು ಹಾಗೂ ಕಂಪ್ಯೂಟರ್, ಲ್ಯಾಪ್ಟಾಪ್ನಲ್ಲಿರುವ ಡೇಟಾಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ದಾಳಿಗೊಳಗಾದ ವ್ಯಕ್ತಿಗಳು ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.