ನಗರದಲ್ಲಿ ನಾಳೆ ಕಣಗಾಲ್ ಕಾಲಕೋಶ
Team Udayavani, Dec 2, 2017, 3:03 PM IST
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ತ್ಯಂತ ಶ್ರೇಷ್ಠ ಚಿತ್ರ ನಿರ್ದೇಶಕ, ಚಿತ್ರಬ್ರಹ್ಮ ದಿ. ಪುಟ್ಟಣ ಕಣಗಾಲ್ ಅವರ 84ನೇ ಜನ್ಮದಿನೋತ್ಸವದ ಅಂಗವಾಗಿ ಸ್ಪಾಟ್ಲೆçಟ್ ಈವೆಂಟ್ ಮ್ಯಾನೇಜೆಂಟ್ ಸಂಸ್ಥೆಯು ನಗರದಲ್ಲಿ “ಕಣಗಾಲ್ ಕಾಲಕೋಶ’ ಎಂಬ ವಿಶೇಷ ಕಾರ್ಯಕ್ರಮ ಒಂದನ್ನು ಆಯೋಜಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಎಚ್.ಎಲ್, ಡಿ.3ರಂದು ಸಂಜೆ 4 ಗಂಟೆಗೆ ಕೆ.ಆರ್.ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕರಾದ ಡಾ.ಕೆ ವಿಶ್ವನಾಥ್, ಭಾರತೀರಾಜ, ಹಿರಿಯ ಚಿತ್ರ ನಟ ಅಂಬರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಕಿರುತೆರೆ ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಲಕ್ಷಿ ಕಣಗಾಲ್, ಅಂತರಾಷ್ಟ್ರೀಯ ಕ್ರೀಡಾಪಟು ಡಾ.ಮಾಲತಿ ಕೆ.ಹೊಳ್ಳ, ಎಂ.ಬಿ. ಜಯರಾಂ,ಟಿ.ವಿ.ಎನ್.ಮೂರ್ತಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದರು. ಇದೇ ವೇಳೆ ಹಿರಿಯ ಚಿತ್ರ ನಿರ್ದೇಶಕ ಪುಟ್ಟಣ್ಣಕಣಗಾಲ್ ಅವರು ನಿರ್ದೇಶಿಸಿರುವ ಚಿತ್ರ ಗೀತೆಗಳನ್ನು ಹೆಸರಾಂತ ಗಾಯಕ, ಗಾಯಕಿಯರು ಹಾಡಲಿದ್ದಾರೆ. ಅಲ್ಲದೆ ಮುಂಬೈನ ಗೀತಾ ಪಡುವಾಲ್ ತಂಡದಿಂದ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.