ಐದೂ ಗ್ಯಾರಂಟಿ ಅನುಷ್ಠಾನ: ಕಾಂಗ್ರೆಸ್ನ 223 ಅಭ್ಯರ್ಥಿಗಳಿಂದ ಪ್ರತಿಜ್ಞೆ
Team Udayavani, May 10, 2023, 6:45 AM IST
ಬೆಂಗಳೂರು: ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದಾಗಿ ಕಾಂಗ್ರೆಸ್ನ ಎಲ್ಲ 223 ಅಭ್ಯರ್ಥಿಗಳು ಪ್ರತಿಜ್ಞೆ ಮಾಡುವುದರ ಜತೆಗೆ ಅವುಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಸಹಿ ಮಾಡಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಹಿಗಳಿರುವ ಗ್ಯಾರಂಟಿ ಕಾರ್ಡ್ಗಳು ಮತದಾರರ ಮನೆಗಳನ್ನು ತಲುಪಿವೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತದಾನದ ಹಿಂದಿನ ದಿನ ತಾನು ಕಣಕ್ಕಿಳಿಸಿರುವ ಎಲ್ಲ 223 (ಒಬ್ಬರು ಕೈ ಬೆಂಬಲಿತ ಅಭ್ಯರ್ಥಿ) ಅಭ್ಯರ್ಥಿಗಳಿಂದ ತನ್ನ ಐದೂ ಗ್ಯಾರಂಟಿಗಳನ್ನು ಒಳಗೊಂಡ ಕಾರ್ಡ್ಗೆ ಸಹಿ ಪಡೆದಿದೆ.
ಅದರಂತೆ ನಾನು ನಿಮ್ಮ ಶಾಸಕ ನಾಗಿ ಆಯ್ಕೆಯಾದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲ ಐದು ಗ್ಯಾರಂಟಿ ಗಳನ್ನು ಈಡೇರಿಸುತ್ತೇನೆ. ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನು ಸಮರ್ಪಿಸಿ ಕೊಳ್ಳುತ್ತೇನೆ. ರಾಜ್ಯದ ಹಿತಾಸಕ್ತಿಗೆ ಪ್ರಧಾನ ಆದ್ಯತೆ ಕೊಟ್ಟು ಕರ್ನಾಟಕದ ಮತ್ತು ಕನ್ನಡದ ಅಸ್ಮಿತೆಯ ರಕ್ಷಣೆಗಾಗಿ ಹೋರಾಡುತ್ತೇನೆ. ನಾನು ಪ್ರಗತಿಪರ ಕರ್ನಾಟಕಕ್ಕಾಗಿ ಭ್ರಷ್ಟಾಚಾರ ತೊಲಗಿಸಲು ಮತ್ತು ಪಾರದರ್ಶಕತೆ ಕಾಪಾಡಲು ಪ್ರತಿಜ್ಞೆ ಮಾಡುತ್ತೇನೆ ಎಂದು ಎಲ್ಲ ಕೈ ಅಭ್ಯರ್ಥಿಗಳು ಸಹಿ ಹಾಕಿದ್ದಾರೆ.
ಈ ಎಲ್ಲ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವುದಾಗಿಯೂ ಭರವಸೆ ನೀಡಿದ್ದು, ಇವುಗಳ ಅನುಷ್ಠಾನಕ್ಕೆ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸ್ವತಃ ತಮ್ಮ ಗ್ಯಾರಂಟಿ ಕೂಡ ನೀಡಿದ್ದಾರೆ.