ಸೈನಿಕರ ನಾಡು ಕೊಡಗು ಈಗ ನೀರ ಮೇಲಿನ ಹಡಗು!
Team Udayavani, Aug 20, 2018, 6:15 AM IST
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದರಿಂದ ಆ ಭಾಗಗಳಲ್ಲಿ ಹಾಹಾಕಾರ ಸೃಷ್ಟಿಸಿದೆ. ಆದರೆ, ಅದೇ ಅಂತರ್ಜಲವು ಭೂಮಿಯ ಮೇಲ್ಭಾಗವನ್ನು ತಲುಪಿ, ಇಡೀ ಮಂಜಿನ ನಗರಿ ಕೊಡಗನ್ನು ಬುಡಮೇಲು ಮಾಡುತ್ತಿದೆ!
ಹೌದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಡಗಿನ ಅಂತರ್ಜಲಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಭೂಮಿಯ ಒಡಲು ಸಂಪೂರ್ಣವಾಗಿ ತೇವಗೊಂಡಿದ್ದು, ಅದರ ಮೇಲೆ ಎಡಬಿಡದೆ ಮಳೆಯಾಗುತ್ತಿದೆ. ಹೀಗೆ ನಿರಂತರವಾಗಿ ನೆನೆದ ಮಣ್ಣು ಸಡಿಲಗೊಂಡು ಗುಡ್ಡಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಇದಕ್ಕೆ ಪೂರಕವಾಗಿ ಜುಲೈ ಅಂತ್ಯಕ್ಕೆ ರಾಜ್ಯ ಅಂತರ್ಜಲ ನಿರ್ದೇಶನಾಲಯವು ಕೊಡಗಿನ 35 ಅಂತರ್ಜಲ ಮಾಪನ ಕೇಂದ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದಾಖಲಾದ ಅಂತರ್ಜಲ ಮಟ್ಟದ ಫಲಿತಾಂಶ ಕೂಡ ಪುಷ್ಟಿ ನೀಡುತ್ತದೆ. 35 ಕೇಂದ್ರಗಳ ಪೈಕಿ 25 ಕಡೆಗಳಲ್ಲಿ ಅಂತರ್ಜಲ ಮಟ್ಟ 10 ಮೀಟರ್ಗಿಂತ ಕಡಿಮೆ ಇದ್ದು, ಈ ಪೈಕಿ 15 ಪ್ರದೇಶಗಳಲ್ಲಿ ಕೇವಲ 5 ಮೀಟರ್ ಒಳಗೇ ಇದೆ. ಆಗಸ್ಟ್ನಲ್ಲಿ ಇದು ಶೂನ್ಯ ತಲುಪಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಕೊಡಗು- ನೀರಿನ ಮೇಲಿನ ಹಡಗು!
ಬೇರೆ ಪ್ರದೇಶಗಳಂತೆ ಕೊಡಗು ಮೇಲ್ನೋಟಕ್ಕೆ ಭೂಮಿಯ ಮೇಲೆ ನಿಂತಂತೆ ಕಾಣುತ್ತಿದೆ. ಆದರೆ, ತಾಂತ್ರಿಕವಾಗಿ ಸಮುದ್ರದ ಮೇಲಿನ ಹಡಗಿನಂತೆ ತೇಲುತ್ತಿದೆ. ಆ ಹಡಗಿನ ಮೇಲೆ ಮಳೆಯ ರುದ್ರನರ್ತನ ಆಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಹಾಗೂ ಭೂವಿಜ್ಞಾನಿ ಡಾ.ಶ್ರೀನಿವಾಸ ರೆಡ್ಡಿ.
ಭೂಮಿಯ ಒಳಭಾಗ ಕೂಡ ಒಂದು ಜಲಾಶಯ ಇದ್ದಂತೆ. ಅದರಲ್ಲೂ ನೀರು ಶೇಖರಣೆ ಆಗುತ್ತದೆ. ಆದರೆ, ಆ ಸಂಗ್ರಹ ಸಾಮರ್ಥ್ಯ ಅಂತಿಮ ಹಂತ ತಲುಪಿದಾಗ, ಓವರ್ಫ್ಲೋ ಆಗುತ್ತದೆ. ಹೀಗೆ ತೇವದಿಂದ ನೆನೆದ ಗುಡ್ಡದ ತಳಭಾಗದ ಮಣ್ಣು ಸಡಿಲಗೊಳ್ಳುತ್ತದೆ. ಅಂತಿಮವಾಗಿ ಕುಸಿತದಲ್ಲಿ ಪರಿಣಮಿಸುತ್ತದೆ. ಕೊಡಗಿನಲ್ಲೂ ಇದೇ ಆಗುತ್ತಿದೆ. ಅಲ್ಲಿ ಬಿದ್ದ ಪ್ರತಿಯೊಂದು ಹನಿಯೂ ಇಂಗಲು ಜಾಗವಿಲ್ಲದೆ ಹರಿದುಹೋಗುತ್ತಿದೆ ಎಂದು ಅವರು ಹೇಳುತ್ತಾರೆ.
ಫÅಯಾಟಿಕ್ ಝೋನ್ನಲ್ಲಿ ನೀರು
ಅಂತರ್ಜಲದಲ್ಲಿ “ಫÅಯಾಟಿಕ್ ಝೋನ್’ (ಮಣ್ಣಿನ ಪದರದಲ್ಲಿರುವ ನೀರು) ಇರುತ್ತದೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿ, ಮಣ್ಣು ಸಡಿಲಗೊಂಡು ಜಾರುತ್ತದೆ. ಆಗ, ಇಳಿಜಾರು ಯಾವ ಕಡೆ ಇರುತ್ತದೆಯೋ ಅತ್ತ ಗುಡ್ಡ ವಾಲುತ್ತದೆ. ಇನ್ನು ಗುಡ್ಡಗಳು ಸಂಪೂರ್ಣ ಶಿಲೆಗಳಿಂದ ಕೂಡಿರುವುದಿಲ್ಲ. ಮಣ್ಣಿನಿಂದಲೂ ಆವೃತವಾಗಿರುತ್ತದೆ ಎಂದು ಕೊಡಗು ಜಿಲ್ಲೆಯ ಅಂತರ್ಜಲ ಕಚೇರಿ ಹಿರಿಯ ಭೂವಿಜ್ಞಾನಿ ಕೆ.ಜಿ. ಸೌಮ್ಯ ಅಭಿಪ್ರಾಯಪಡುತ್ತಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯೊಂದಿಗೆ ಹಸಿರಿನ ಪದರು ಕೂಡ ಕಿತ್ತುಹೋಗಿದೆ. ಕೊನೆಪಕ್ಷ ಮರಗಳು ಇದ್ದರೆ, ನೀರನ್ನು ಸಾಧ್ಯವಾದಷ್ಟು ಹಿಡಿದಿಡುತ್ತಿದ್ದವು. ಈಗ ಒಂದು ಮರ ಧರೆಗುರುಳುತ್ತಿದ್ದಂತೆ, ಆ ಜಾಗದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದು ಅನಾಹುತದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಮಳೆ ಬಿದ್ದಾಗ, ಶೇ. 5ರಷ್ಟು ಭೂಮಿಗಿಳಿದರೆ, ಉಳಿದದ್ದು ಹರಿದುಹೋಗುತ್ತದೆ. ಆದರೆ, ಕೊಡಗು ಸಂಪೂರ್ಣ ನೀರಿನಿಂದ ಆವೃತವಾಗಿರುವುದರಿಂದ ನೀರಿನ ಹರಿವು ಅಧಕ್ಕರ್ಧ ಕುಸಿದಿದೆ ಎಂದೂ ಸೌಮ್ಯ ಹೇಳಿದ್ದಾರೆ.
ಹಲವು ಕಾರಣ ಇರಬಹುದು; ಜಿಎಸ್ಐ ಗುಡ್ಡಗಳ ಕುಸಿತಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ನೀರು ಒಳಗೆ ನುಸುಳುವುದು, ಆ ಭಾಗದ ಭೂಮಿಯಲ್ಲಿನ ಶಿಲೆಗಳ ಗುಣಲಕ್ಷಣಗಳು, ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಅಂದರೆ ಇಳಿಜಾರುಗಳಲ್ಲಿ ಮನೆಗಳನ್ನು ನಿರ್ಮಿಸುವುದು, ರಸ್ತೆಗಳನ್ನು ನಿರ್ಮಿಸಿದ ಕೆಳಭಾಗದಲ್ಲಿ ನದಿ ಹರಿಯುತ್ತಿರಬಹುದು. ಹಾಗಾಗಿ, ಇಂತಹದ್ದೇ ಕಾರಣವೆಂದು ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ ಎಂದು ಭಾರತೀಯ ಭೂಸರ್ವೇಕ್ಷಣೆ (ಜಿಎಸ್ಐ) ನಿರ್ದೇಶಕ ಕೆ.ವಿ. ಮಾರುತಿ ಸ್ಪಷ್ಟಪಡಿಸುತ್ತಾರೆ.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…