ಕೆಪಿಟಿಸಿಎಲ್ ಗಮನ ಸೆಳೆಯಲು 25ರಂದು ನೌಕರರ ಜಾಥಾ
Team Udayavani, Sep 23, 2017, 11:45 AM IST
ಬೆಂಗಳೂರು: ಪದೋನ್ನತಿ ಮೀಸಲಾತಿ ನೀತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕೆಪಿಟಿಸಿಎಲ್ ಪಾಲಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಕೆಪಿಟಿಸಿಎಲ್ ಆಡಳಿತ ಮಂಡಳಿಯ ಗಮನ ಸೆಳೆಯಲು ಸೆ.25ರಂದು ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ನಿಂದ ಕಾವೇರಿ ಭವನದ ವರೆಗೆ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಟಿಸಿಎಲ್ ಜನರಲ್ ಕೆಟಗರಿ ಅಸೋಸಿಯೇಷನ್ ಅಧ್ಯಕ್ಷ ಶಿವ ಪ್ರಕಾಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬ ಧ್ಯೇಯ ವಾಕ್ಯದಡಿ ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ಆದೇಶವನ್ನು ಕೆಪಿಟಿಸಿಎಲ್ ಪಾಲಿಸದ ಕಾರಣ ಹಲವು ನೌಕರರಿಗೆ ಅನ್ಯಾಯವಾಗಿದೆ. 1978ರಲ್ಲಿ ರಾಜ್ಯ ಸರ್ಕಾರದ ಮೀಸಲಾತಿ ನೀತಿಗೆ ವಿರುದ್ಧ ನೀಡಲಾದ ಸಾಂದರ್ಭಿಕ ಜೇಷ್ಠತೆಯನ್ನು ಎಂ.ಜಿ.ಬಡಪ್ಪನವರ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಕಾನೂನಿಗೆ ವಿರುದ್ಧವಾಗಿ ನೀಡಿದ್ದ ಸಾಂದರ್ಭಿಕ ಜೇಷ್ಠತೆಯನ್ನು ಆಗ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಬಡಪ್ಪನವರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ಲೋಕೋಪಯೋಗಿ ಇಲಾಖೆಯಲ್ಲಿ ಪಾಲನೆಯಾಗಿದೆ. ಆದರೆ, ಕೆಪಿಟಿಸಿಎಲ್ ಇದುರೆಗೂ ಆದೇಶ ಪಾಲನೆಗೆ ಮುಂದಾಗದ ಕಾರಣ ಜಾಥಾ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಭಾಗಗಳ ನೌಕರರು ಮತ್ತು ಅಧಿಕಾರಿಗಳು ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.