Bangalore: ಪ್ರೇಯಸಿ ದೂರ; ಪ್ರಿಯಕರ ಶಂಕಾಸ್ಪದ ಸಾವು
Team Udayavani, Mar 9, 2024, 11:02 AM IST
ಬೆಂಗಳೂರು: ನಂದಿನಿ ಲೇಔಟ್ನ 4ನೇ ಬ್ಲಾಕ್ ನಿವಾಸಿ, ಪದವಿ ವಿದ್ಯಾರ್ಥಿ ಚೇತನ್ (20) ಎಂಬಾತ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.
ಮೃತ ಚೇತನ್ ಗುರುವಾರ ರಾತ್ರಿ ಚಾಕು ಇರಿತಕ್ಕೊಳಗಾಗಿ ಆಟೋದಲ್ಲಿ ಬಿದ್ದಿದ್ದನು. ಇದನ್ನು ನೋಡಿದ್ದ ಪೋಷಕರು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ದಾವಣಗೆರೆ ಮೂಲದ ಚೇತನ್ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದು,ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅದೇ ಯುವತಿಯನ್ನು ಮದುವೆ ಮಾಡಿಕೊಳ್ಳಲು ಸಿದ್ಧವಾಗಿದ್ದ. ಆದರೆ ಇತ್ತೀಚೆಗೆ ಆಕೆ ಈತನನ್ನು ನಿರಾಕರಿಸಿದ್ದಳು. ಅಲ್ಲದೆ ಯುವತಿ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಅದರಿಂದ ನೊಂದಿದ್ದ ಚೇತನ್ ಗುರುವಾರ ರಾತ್ರಿ ಯುವತಿ ಮನೆ ಬಳಿ ಹೋಗಿ ಪ್ರೀತಿಸದಿದ್ದರೆ ಸಾಯುವುದಾಗಿ ಹೇಳಿದ್ದಾನೆ. ಈ ವೇಳೆ ಯುವತಿ ಮನೆಯವರು ಹಾಗೂ ಚೇತನ್ ನಡುವೆ ಮಾತಿನ ಚಕಮಕಿ ನಡೆದಿದೆ.
ಯುವತಿ ಮನೆಯವರು, ಚೇತನ್ ಪೋಷಕರಿಗೆ ಕರೆ ಮಾಡಿ ಗಲಾಟೆ ವಿಷಯ ತಿಳಿಸಿದ್ದರು. ಪೋಷಕರು ಮನೆ ಬಳಿ ಬರುವಷ್ಟರಲ್ಲಿ ಚೇತನ್ ಆಟೋದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಹೀಗಾಗಿ ಯುವತಿ ಕಡೆಯವರೇ ಚೇತನ್ನನ್ನು ಕೊಲೆ ಮಾಡಿರುವುದಾಗಿ ಪೋಷಕರು ದೂರು ನೀಡಿದ್ದಾರೆ. ಆದರೆ ಯುವತಿ ಕಡೆಯವರು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚೇತನ್, ಹೀಗಾಗಿ ಆತನೇ ಚಾಕುವಿನಿಂದ ಇರಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.