ಬೆಳಗಾವಿಯ ಅಶೋಕ ಚಂದರಗಿಗೆ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ
Team Udayavani, Feb 19, 2018, 6:55 AM IST
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನೀಡುವ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಗಡಿ ಭಾಗದಲ್ಲಿ ಕನ್ನಡಮ್ಮನ ಸೇವೆ ಮಾಡುತ್ತಿರುವ ಕನ್ನಡಪರ ಹೋರಾಟಗಾರ ಬೆಳಗಾವಿಯ ಅಶೋಕ ಯಂಕಪ್ಪ ಚಂದರಗಿ ಅವರು ಕನ್ನಡ ಚಳುವಳಿ ವೀರ ಸೇನಾನಿ “ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ದತ್ತಿ ಪ್ರಶಸ್ತಿಗಳ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ. “ಫಾದರ್ ಚಸರಾ ಕನ್ನಡ ಸಂಸ್ಕೃತಿ ಪ್ರಶಸ್ತಿ’ಗೆ ಚಿಂತಕ ಎಫ್.ಎಂ.ನಂದಗಾಂವ್ ಮತ್ತು ಡಾ.ಸಿ.ಎಸ್.ದ್ವಾರಕನಾಥ್ ಮತ್ತು “ಮಾಹಿತಿ ಹಕ್ಕು ತಜ್ಞ ರಾಜಶೇಖರ ದತ್ತಿ ಪ್ರಶಸ್ತಿ’ಗೆ ಮಾಹಿತಿ ಹಕ್ಕು ಹೋರಾಟಗಾರ ಎನ್.ಹನುಮೇಗೌಡ ಅವರು ಆಯ್ಕೆಯಾಗಿದ್ದಾರೆ.
ಹಿರಿಯ ಲೇಖಕಿ “ಎ.ಪಂಕಜ ದತ್ತಿ ಪ್ರಶಸ್ತಿ’ಗೆ ಕವಿ ಮತ್ತು ಪತ್ರಕರ್ತೆ ಪ್ರತಿಭಾ ನಂದಕುಮಾರ್ ಭಾಜನರಾಗಿದ್ದಾರೆ.
ಈ ಬಗ್ಗೆ ಮಾಹಿತಿಯನ್ನು ನೀಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಚಳುವಳಿ ವೀರ ಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಯು 25 ಸಾವಿರ ರೂ. ಫಾದರ್ ಚಸರಾ ಕನ್ನಡ ಸಂಸ್ಕೃತಿ ಪ್ರಶಸ್ತಿ 15 ಸಾವಿರ ರೂ. ಮತ್ತು ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ 5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಅಲ್ಲದೆ ಹಿರಿಯ ಲೇಖಕಿ ಎ.ಪಂಕಜ ದತ್ತಿ ಪ್ರಶಸ್ತಿ 10 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಹೇಳಿದರು.
“ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ ಮಾರ್ಚ್ 18 ರಂದು ಮತ್ತು ಏಪ್ರಿಲ್ 20 ರಂದು “ಮಾಹಿತಿ ಹಕ್ಕು ತಜ್ಞ ರಾಜಶೇಖರ ದತ್ತಿ ಪ್ರಶಸ್ತಿ’ ಮತ್ತು “ಎ.ಪಂಕಜ ದತ್ತಿ ಪ್ರಶಸ್ತಿ’ ಗಳನ್ನು ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಸಾಪದ ಗೌರವ ಕಾರ್ಯದರ್ಶಿ ವಾ.ಚ.ಚನ್ನೇಗೌಡ ತಿಳಿಸಿದ್ದಾರೆ.
ಕಸಾಪದಲ್ಲಿ ಪ್ರಶಸ್ತಿ ಪ್ರದಾನ.
ಮಾರ್ಚ್ 22 ರಂದು ಕನ್ನಡ ಚಳುವಳಿ ವೀರ ಸೇನಾನಿ ಮ.ರಾಮಮೂರ್ತಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರದ ಹಿನ್ನೆಲೆ ಯಲ್ಲಿ ಅವರನ್ನು ನೆನೆಯುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದೆ.ಅಂದು ಸಂಜೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿಅವರು ಬೆಳಗಾವಿಯ ಅಶೋಕ ಯಂಕಪ್ಪ ಚಂದರಗಿ ಅವರಿಗೆ ಮ.ರಾಮಮೂರ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.