ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ:ಮಯೂರಿ
Team Udayavani, Oct 12, 2018, 10:42 AM IST
ಬೆಂಗಳೂರು: ಬಾಲಿವುಡ್ನಿಂದ ಆರಂಭವಾದ “ಮೀಟೂ’ ಅಭಿಯಾನ ಹಲವರ ಹೆಸರನ್ನು ಸುತ್ತಿಕೊಂಡು ಮುಂದೆ
ಸಾಗುತ್ತಿದೆ. ಈ ಅಭಿಯಾನದಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೆಸರು ಕೂಡಾ ಕೇಳಿಬಂದಿದ್ದು, ರಘುದೀಕ್ಷಿತ್, ಗಾಯಕಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.
ರಘು ದೀಕ್ಷಿತ್ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಈ ಕುರಿತು ರಘು ದೀಕ್ಷಿತ್ ಪತ್ನಿ, ನೃತ್ಯಗಾರ್ತಿ ಮಯೂರಿ
ಉಪಾಧ್ಯ ಟ್ವೀಟರ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮೀಟೂ ಅಭಿಯಾನಕ್ಕೆ ತನ್ನ ಸಂಪೂರ್ಣ
ಬೆಂಬಲವಿದೆ ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. “ನನ್ನ ಮದುವೆ, ವಿಚ್ಛೇದನ ಇಲ್ಲಿ ಅಪ್ರಸ್ತುತ. ನಾನು ಮೊದಲು ಹೆಣ್ಣು, ಆ ನಂತರ ಹೆಂಡತಿ.
ಸಮಾಜದಲ್ಲಿ ಸೆಲೆಬ್ರೆಟಿಯಾಗಲೀ ಅಥವಾ ಸಾಮಾನ್ಯ ವ್ಯಕ್ತಿಗಾಗಲೀ ಅವರದೇ ಆದ ಗೌರವವಿದೆ’. “ನನಗೆ ಆ ಘಟನೆಯ ನಿಜಾಂಶದ ಬಗ್ಗೆ ಗೊತ್ತಿಲ್ಲ. ಆದರೆ, ಇಂತಹ ವಿಷಯದ ಬಗ್ಗೆ ಮಾತನಾಡಲು ಧೈರ್ಯಬೇಕು. ಲೈಂಗಿಕ ದೌರ್ಜನ್ಯದ ಬಗ್ಗೆ ನನ್ನ ನಿಲುವು ಸ್ಪಷ್ಟವಾಗಿದೆ.
ತಪ್ಪು ಮಾಡಿದವರಿಗೆ ಹಾಗೂ ಆ ತಪ್ಪಿನ ಬಗ್ಗೆ ಪಶ್ಚಾತ್ತಾಪವಿರುವವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಎಲ್ಲಾ ಸಂತ್ರಸ್ತೆಯರಿಗೆ ನನ್ನ ಬೆಂಬಲವಿದೆ’ ಎಂದು ಟ್ವೀಟ್ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ಮಯೂರಿ ಕಳೆದ ಮೂರು ವರ್ಷಗಳಿಂದ ದೂರವಿದ್ದು, ವಿಚ್ಛೇದನಕ್ಕೆ ಪ್ರಕ್ರಿಯೆ ನಡೆಯುತ್ತಿದೆ.