ಹಿಂಬಡ್ತಿ ಪಡೆದವರಿಗೆ ಹಳೇ ಹುದ್ದೆಯ ವೇತನ
Team Udayavani, Aug 20, 2018, 6:00 AM IST
ಬೆಂಗಳೂರು: ಮೀಸಲು ಬಡ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಹಿಂಬಡ್ತಿ ಅಥವಾ ಮುಂಬಡ್ತಿ ಪಡೆದವರಿಗೆ ಅವರು ಹಾಲಿ ನಿರ್ವಹಿಸುತ್ತಿರುವ ಹುದ್ದೆಗಳಿಗೆ ಅನುಸಾರ ವೇತನ ನೀಡುವಂತೆ ಇತ್ತೀಚೆಗೆ ತಾನೇ ಆದೇಶ ಹೊರಡಿಸಿದ್ದ ಮುಖ್ಯ ಕಾರ್ಯದರ್ಶಿಗಳು ಇದೀಗ ಆದೇಶದಲ್ಲಿ ಕೊಂಚ ಮಾರ್ಪಾಟು ಮಾಡಿದ್ದು, ಸುಪ್ರಿಂ ಕೋರ್ಟ್ ಆದೇಶದಂತೆ ಹಿಂಬಡ್ತಿ ಪಡೆದಿರುವ ಎಸ್ಸಿ ಮತ್ತು ಎಸ್ಟಿ ನೌಕರರಿಗೆ ಅವರ ಹಿಂದಿನ ಹುದ್ದೆಯ ವೇತನ ನೀಡುವಂತೆ ಸೂಚಿಸಿದ್ದಾರೆ.
ಮೀಸಲು ಬಡ್ತಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಮೀಸಲು ಬಡ್ತಿ ಆಧಾರದ ಮೇಲೆ ಬಡ್ತಿ ಪಡೆದ ಎಸ್ಸಿ, ಎಸ್ಟಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. ಹೀಗಿರುವಾಗ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿದ್ದು, ಹಿಂಬಡ್ತಿ ಪಡೆದ ನೌಕರರಿಗೆ ಹಾಲಿ ನಿರ್ವಹಿಸುತ್ತಿರುವ ಹುದ್ದೆಯ ವೇತನ ನೀಡಿದರೆ ಎಸ್ಸಿ, ಎಸ್ಟಿ ನೌಕರರಿಗೆ ಅನ್ನಾಯವಾಗಲಿದೆ ಎಂದು ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಸದಸ್ಯರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಗೆ ವಿರುದ್ಧವಾಗಿ ಆದೇಶ ಬಂದರೆ ಅದಕ್ಕೆ ಬದ್ಧವಾಗಿ ಅಡ್ಹಾಕ್ ವೇತನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಎಚ್ಆರ್ಎಂಎಸ್ ಮೂಲಕ ಸಾಧ್ಯವಾಗದಿದ್ದರೆ ಭೌತಿಕವಾಗಿ ಹಣ ನೀಡುವ ಮೂಲಕ ಎಸ್ಸಿ, ಎಸ್ಟಿ ನೌಕರರಿಗೆ ವೇತನ ಪಾವತಿಸಲು ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು, ಸಂಬಂಧಿಸಿದ ಸ್ವಾಯತ್ತ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು, ನಿಗಮ ಮಂಡಳಿಗಳು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.