ಕಳ್ಳತನಕ್ಕಾಗಿ ನಾಯಿಗಳಿಗೆ ವಿಷವಿಟ್ಟ ದುಷ್ಕರ್ಮಿಗಳು
Team Udayavani, Aug 6, 2018, 11:56 AM IST
ಬೆಂಗಳೂರು: ಕಳ್ಳತನ ಮಾಡಲು ಅಡ್ಡಿಯಾಗಿವೆ ಎಂಬ ಕಾರಣಕ್ಕೆ ಮಾಂಸದಲ್ಲಿ ವಿಷ ಹಾಕಿ 25 ಬೀದಿ ನಾಯಿಗಳನ್ನು ಕೊಂದಿರುವ ಘಟನೆ ವಿದ್ಯಾರಣ್ಯಪುರದ ಟೆಲಿಕಾಂ ಬಡಾವಣೆಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಬಡಾವಣೆಯಲ್ಲಿ ನಿಲುಗಡೆ ಮಾಡಿದ್ದ ಆಟೋದಲ್ಲಿನ ಸ್ಪೀಕರ್ ಸಿಸ್ಟಂಗಳನ್ನು ಕಳ್ಳತನ ಮಾಡಲಾಗಿದ್ದು, ಈ ವೇಳೆ ಬೀದಿ ನಾಯಿಗಳು ಕಳ್ಳರನ್ನು ಬೆನ್ನಟ್ಟಿವೆ. ಹೀಗಾಗಿ ನಾಯಿಗಳನ್ನು ಸಾಯಿಸಬೇಕೆಂದು ಸಂಚು ರೂಪಿಸಿದ ಕಿಡಿಗೇಡಿಗಳು ಮಾಂಸದಲ್ಲಿ ವಿಷ ಬೆರೆಸಿ ನಾಯಿಗಳಿಗೆ ನೀಡಿದ್ದು, ಇದನ್ನು ಸೇವಿಸಿದ ಸುಮಾರು 25 ನಾಯಿಗಳು ಸಾವಿಗೀಡಾಗಿವೆ.
ನಾಯಿಗಳು ಸಾವಿಗೀಡಾಗಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲವು ಸಾಯುವ ಹಂತ ತಲುಪಿದ್ದ ನಾಯಿಗಳಿಗೆ ಹೆಬ್ಟಾಳದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬದುಕಿಸಲಾಗಿದೆ ಎಂದು ಸ್ಥಳೀಯರಾದ ಗೋಪಿ ಮಾಹಿತಿ ನೀಡಿದರು.
ಸತ್ತ ನಾಯಿಗಳು ಕೊಳೆತು ನಾರುತ್ತಿದ್ದು, ಸಾರ್ವಜನಿಕರ ಓಡಾಡಲು ಕಷ್ಟವಾಗುತ್ತಿದೆ. ಈ ಕುರಿತು ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಸ್ಥಳೀಯರೆಲ್ಲ ಸೇರಿ ಸುಮಾರು 15 ಮೃತ ನಾಯಿಗಳ ದೇಹಗಳನ್ನು ತೆರವುಗೊಳಿಸಿದ್ದು, ಇನ್ನೂ 10 ನಾಯಿ ದೇಹಗಳು ಬಾಕಿಯಿವೆ. ಪಾಲಿಕೆಯ ಅಧಿಕಾರಿಗಳು ಕೂಡಲೇ ತೆರವುಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.