ಬಡ್ತಿ ಮೀಸಲಾತಿ: ಸಂಪುಟದಲ್ಲಿ ಚರ್ಚಿಸಿ ತೀರ್ಮಾನ
Team Udayavani, Sep 28, 2018, 6:40 AM IST
ಬೆಂಗಳೂರು: ಬಡ್ತಿ ಮೀಸಲಾತಿಗೆ ಸಂಬಂಧಪಟ್ಟಂತೆ ನಾಗರಾಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಬಿ.ಕೆ.ಪವಿತ್ರ ಪ್ರಕರಣ ಸಂಬಂಧ ಅ.3ರ ವಿಚಾರಣೆಯ ಅಂಶಗಳನ್ನು ಆಧರಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಾಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಅದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆದಿದ್ದು, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಅವರೊಂದಿಗೂ ಚರ್ಚಿಸಲಾಗಿದೆ ಎಂದು ತಿಳಿಸಿದರು.ಬುಧವಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲೂ ಕಾನೂನಿನ ಪ್ರಕಾರ ಬಡ್ತಿ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ನಿರ್ಬಂಧ ಹೇರದಂತೆ ಸುಪ್ರೀಂ ಕೋರ್ಟ್ಅನ್ನು ಒತ್ತಾಯಿಸಲಾಗಿದೆ.
ಆದರೆ ಸುಪ್ರೀಂ ಕೋರ್ಟ್ ಅ.3ರವರೆಗೆ ನಿರೀಕ್ಷಿಸುವಂತೆ ಸೂಚಿಸಿದೆ. ಅಡ್ವೋಕೇಟ್ ಜನರಲ್ ಅವರಿಗೆ ನೀಡಿರುವ ಸೂಚನೆಯು ರಾಜ್ಯ ಸರ್ಕಾರಕ್ಕೆ ನೀಡಿರುವ ಸೂಚನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜತೆಗೆ ಪವಿತ್ರ ಪ್ರಕರಣ ವಿಚಾರಣೆ ವೇಳೆ ಕಾನೂನು ಬಗ್ಗೆಯೂ ಚರ್ಚೆ ಮಾಡುವುದಾಗಿ ಹೇಳಿದೆ ಎಂದು ಮಾಹಿತಿ ನೀಡಿದರು.
ಹಾಗಾಗಿ ನಾಗರಾಜ್ ಪ್ರಕರಣದ ತೀರ್ಪು ಹಾಗೂ ಅ.3ರಂದು ಸುಪ್ರೀಂ ಕೋರ್ಟ್ ನಡೆಸುವ ವಿಚಾರಣೆ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.