ಉನ್ನತ ಶಿಕ್ಷಣ ಸಚಿವರ ಕೊಠಡಿಗೆ ಬೀಗ: ಧರಣಿ
Team Udayavani, Jul 18, 2017, 3:55 AM IST
ಬೆಂಗಳೂರು: ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಜೆಡಿಎಸ್ ವಿಧಾನಪರಿಷತ್ ಸದಸ್ಯರು ಸೋಮವಾರ ವಿಧಾನಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಬಸವರಾಯ ರಾಯರೆಡ್ಡಿ ಕೊಠಡಿಗೆ ಬೀಗ ಹಾಕಿ ಧರಣಿ ನಡೆಸಿದರು. ವಿಧಾನಪರಿಷತ್ ಸದಸ್ಯರಾದ ರಮೇಶ್ಬಾಬು, ತೂಪಲ್ಲಿ ಚೌಡ ರೆಡ್ಡಿ, ಶ್ರೀಕಂಠೇಗೌಡ ಅವರು, ಸಚಿವರ ಕೊಠಡಿ ಮುಂದೆ ಧರಣಿ ನಡೆಸಿ ಯಾವುದೇ ಕಾರಣಕ್ಕೆ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಿದರು.
2 ಸಾವಿರ ಸಹ ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ನಮ್ಮ ವಿರೋಧವಿಲ್ಲ. ಆದರೆ, ಹತ್ತು ವರ್ಷಕ್ಕೂ ಮೇಲ್ಪಟ್ಟು ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ತೆಗೆಯಲು ಹೊರಟಿರುವುದು ಸರಿಯಲ್ಲ. ಮಾನವೀಯತೆ ಆಧಾರದ ಮೇಲೆ ಅವರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ ಸಚಿವರು ವಾರದಲ್ಲಿ ಗೊಂದಲ ನಿವಾರಿಸುವ ಭರವಸೆ ಕೊಡಿಸಿದರು.