ಕಿತ್ತೂರು ವಿಜಯೋತ್ಸವದಂದೇ ಚೆನ್ನಮ್ಮ ಜಯಂತ್ಯುತ್ಸವ
Team Udayavani, Oct 22, 2018, 7:00 AM IST
ಬೆಂಗಳೂರು:ಕಿತ್ತೂರು ವಿಜಯೋತ್ಸವ ದಿನದಂದು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಆಚರಿಸಲು ಮುಂದಾಗಿರುವ ಸರ್ಕಾರದ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ.
ಬ್ರಿಟೀಷರು ಕಿತ್ತೂರು ಸೈನ್ಯದ ಮೇಲೆ ದಾಳಿ ನಡೆಸಿದಾಗ ವೀರ ರಾಣಿ ಕಿತ್ತೂರು ಚೆನ್ನಮ್ಮ ಸೈನ್ಯದೊಂದಿಗೆ ಹೋರಾಟ ನಡೆಸಿ ಜಯಗಳಿಸಿದ ದಿನದ ಸ್ಮರಣೆಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಕಿತ್ತೂರು ವಿಜಯೋತ್ಸವ ಆಚರಿಸುತ್ತಿದೆ. ಆದರೆ, ಈ ವರ್ಷ ಆ ದಿನವನ್ನು ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಎಂದು ಆಚರಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ.23 ರಂದು ಆಯೋಜಿಸಿರುವ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಎಂದು ಮುದ್ರಿಸಲಾಗಿದೆ.
ಇದು ಆಕ್ಷೇಪಕ್ಕೆ ಕಾರಣವಾಗಿದ್ದು, ಅ.23 ರಂದು ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡಿ ಜಯಗಳಿಸಿದ ದಿನ. ಅಂದು ಸ್ವಾತಂತ್ರ್ಯ ಭಾರತಕ್ಕಾಗಿ ನಡೆದ ಯುದ್ಧದ ಮೊದಲ ಜಯ. ಆ ದಿನವನ್ನು ವಿಜಯೋತ್ಸವವನ್ನಾಗಿಯೇ ಆಚರಿಸಬೇಕು. 1778 ರ ನವೆಂಬರ್ 14 ರಂದು ರಾಣಿ ಚೆನ್ನಮ್ಮ ಬೆಳಗಾವಿಯ ಕಾಕತಿಯಲ್ಲಿ ಹುಟ್ಟಿದರು ಎಂದು ಇತಿಹಾಸ ಹೇಳುತ್ತದೆ. ಹೀಗಾಗಿ ನ.14 ರಂದು ರಾಣಿ ಚೆನ್ನಮ್ಮ ಜಯಂತಿ ಆಚರಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಸಂಘದ ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರ್ ಹೇಳುತ್ತಾರೆ.
ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಆಹ್ವಾನ ಪತ್ರಿಕೆಯಲ್ಲಿ ಗೊಂದಲ ಮೂಡಿಸಿರುವುದು ಸರಿಯಲ್ಲ ಎಂದು ತಿಳಿಸುತ್ತಾರೆ.ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ರಾಣಿ ಚೆನ್ನಮ್ಮ ಜಯಂತಿ ಆಚರಣೆಗೂ ಅನುಮತಿ ನೀಡಿದ್ದರು. ಆದರೆ, ಕಿತ್ತೂರು ವಿಜಯೋತ್ಸವದ ದಿನದಂದೇ ಚೆನ್ನಮ್ಮ ಜಯಂತಿ ಆಚರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿತ್ತೂರು ವಿಜಯೋತ್ಸವ ಅಕ್ಟೋಬರ್ 24 ರಂದು ಆಚರಿಸುವುದೇ ಸೂಕ್ತ. ರಾಣಿ ಚೆನ್ನಮ್ಮ ಹುಟ್ಟಿದ್ದು ನವೆಂಬರ್ 14. ಹೀಗಾಗಿ, ಚೆನ್ನಮ್ಮ ಜಯಂತಿ ಪ್ರತ್ಯೇಕವಾಗಿ ಆಚರಿಸಬೇಕು ಎಂದು ಇತಿಹಾಸ ಪ್ರಾಧ್ಯಾಪಕ ದೀಪಕ್ ಆಲೂರು ಹೇಳುತ್ತಾರೆ.
– ಶಂಕರ ಪಾಗೋಜಿ