ಜವಾಬ್ದಾರಿ ಅರಿತವನೇ ಶ್ರೇಷ್ಠ ವ್ಯಕ್ತಿ: ನ್ಯಾ. ಶೆಟ್ಟಿ
Team Udayavani, Apr 24, 2017, 12:19 PM IST
ಬೆಂಗಳೂರು: ಸರ್ಕಾರ ಮತ್ತು ಸಮಾಜ ಕಲ್ಪಿಸಿಕೊಟ್ಟಿರುವ ಉತ್ತಮ ಅವಕಾಶವನ್ನು ಸದುಪಯೋಗ ಮಾಡಿಕೊಂಡರೆ ಪ್ರತಿಯೊಬ್ಬರೂ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆಯ ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ ಹಾಗೂ ನವಕರ್ನಾಟಕ ಪ್ರಕಾಶನದ ಕೋ. ಚೆನ್ನಬಸಪ್ಪ ಅವರ “ಬೇಡಿ ಕಳಚಿತು ದೇಶ ಒಡೆಯಿತು’ ಕೃತಿ ಪರಿಚಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಲು ಹಲವು ದಾರಿಗಳಿವೆ. ಆದರೆ, ನಾವು ಆಯ್ಕೆ ಮಾಡಿಕೊಳ್ಳುವ ದಾರಿ ಉತ್ತಮದ್ದಾಗಿರಬೇಕು. ಅದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಪ್ರತಿ ವಿದ್ಯಾರ್ಥಿಯೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ತಮ್ಮ ಜವಾಬ್ದಾರಿ ಅರಿತು ನಡೆದರೆ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.
ತೋಟದಪ್ಪ ಧರ್ಮಸಂಸ್ಥೆ ಸಮಾಜಕ್ಕೆ ಸಜ್ಜನ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಡಾ ಶ್ರೀ ಶಿವಕುಮಾರ ಸ್ವಾಮೀಜಿ, ಎಸ್. ನಿಜಲಿಂಗಪ್ಪ ಸೇರಿದಂತೆ ಅನೇಕ ಗಣ್ಯರನ್ನು ಪರಿಚಯಿಸಿದೆ. ಹಾಗೇ ನೀವು ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ, ಅದು ನೀವು ನಿಮ್ಮ ಸಂಸ್ಥೆಗೆ ಕೊಡುವ ಗೌರವ ಎಂದ ಅವರು, ರಾಜ್ಯದ ಎಲ್ಲ ಶಾಲೆ, ಕಾಲೇಜುಗಳ ಗ್ರಂಥಾಲಯದಲ್ಲಿ ಕೋ. ಚೆನ್ನಬಸಪ್ಪ. ಅವರ ಈ ಕೃತಿ ಲಭ್ಯವಾಗಿಸಲು ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ನಾಡೋಜ ಡಾ. ಕೋ.ಚೆನ್ನಬಸ್ಪ ಮಾತನಾಡಿ, ಬರಹಗಾರ ಬರೆದ ಪುಸ್ತಕವನ್ನು ಹೆಚ್ಚು ಜನ ಓದುವುದು ಆತನಿಗೆ ಸಿಗುವ ನಿಜವಾದ ಸನ್ಮಾನ. ಲೇಖಕರು ಬರೆಯುವ ಪುಸ್ತಕವನ್ನು ಯಾರೂ ಓದದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿಯ ವಿಟಿಯು ವಿಶ್ರಾಂತ ಉಪಕುಲಪತಿ ಪ್ರೊ. ಎಚ್.ಪಿ.ಖೀಂಚ, ಪ್ರೊ. ಕೆ.ಸಿದ್ದಪ್ಪ, ಲಕ್ಷ್ಮಣ ಕೊಡಸೆ, ಇತಿಹಾಸ ತಜ್ಞ ಡಾ. ಎಚ್.ಎಸ್.ಗೋಪಾಲ ರಾವ್ ಇದ್ದರು.