ಏಳು ಕೆಎಎಸ್ ಅಧಿಕಾರಿಗಳ ವರ್ಗ
Team Udayavani, Jan 19, 2017, 3:50 AM IST
ಬೆಂಗಳೂರು: ಏಳು ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ವಿಶೇಷ ಜಿಲ್ಲಾಧಿಕಾರಿ (ಜಾರಿದಳ) ಆಗಿದ್ದ ಡಾ.ಬಿ.ವಿ.ವಾಸಂತಿ ಅಮರ್ ಅವರನ್ನು ವಿಧಾನಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಜತೆಗೆ ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರ ಹೆಚ್ಚುವರಿ ಹೊಣೆಯನ್ನೂ ನೀಡಲಾಗಿದೆ.
ಅದೇ ರೀತಿ ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರನ್ನಾಗಿ ಡಿ.ಆರ್.ಅಶೋಕ್ ಅವರನ್ನು ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆದಿರುವ ಸರ್ಕಾರ, ಅವರನ್ನು ಹಾಲಿ ಇದ್ದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿಸಿದೆ.
ಉಳಿದಂತೆ ಗಂಗೂಬಾಯಿ ಆರ್.ಮಾನಕಲ್ ಅವರನ್ನು ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ) ಹುದ್ದೆಗೆ ವರ್ಗಾಯಿಸಲಾಗಿದೆ. ನೇಮಕಾತಿ ನಿರೀಕ್ಷಣೆಯಲ್ಲಿದ್ದ ಖಾಜಿ ನಫೀಸಾ ಅವರಿಗೆ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ನಿಬಂಧಕರು, ಕೆ.ಎಸ್.ಲತಾಕುಮಾರಿ ಅವರನ್ನು ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರನ್ನಾಗಿ ಮತ್ತು ವೈ.ಎಸ್.ಮಲ್ಲಿಕಾರ್ಜುನ ಅವರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಅಧಿಕಾರಿಯನ್ನಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.