ಬಜೆಟ್ ಕಗ್ಗಂಟು: ಸಿದ್ದು-ಎಚ್ಡಿಕೆ ಪ್ರತಿಷ್ಠೆ
Team Udayavani, Jun 26, 2018, 6:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬಜೆಟ್ ಮಂಡನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದ್ದು, ಇಂದು ಒಂದು ರೀತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡಿಸುವ ಮಟ್ಟಕ್ಕೂ ತಲುಪುವ ಸಾಧ್ಯತೆಗಳು ಕಂಡು ಬರುತ್ತಿವೆ.
ಸರ್ಕಾರದಲ್ಲಿ ಕಾಂಗ್ರೆಸ್ ಸಹ ಭಾಗಿಯಾಗಿರುವುದರಿಂದ ಹೊಸ ಬಜೆಟ್ ಮಂಡಿಸುವ ಅವಶ್ಯಕತೆಯಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ತನ್ನ ನಿಲುವುನಿಂದ ಒಂದಿಷ್ಟೂ ಅಲುಗಾಡುತ್ತಿಲ್ಲ. ಬಜೆಟ್ ಮಂಡಿಸುವ ನಿರ್ಧಾರದಿಂದಲೂ ಎಚ್.ಡಿ.ಕುಮಾರಸ್ವಾಮಿ ಹಿಂದೆ ಸರಿಯುತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜುಲೈ 5 ಕ್ಕೆ ಬಜೆಟ್ ಮಂಡಿಸುವುದು ಖಚಿತ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪುತ್ರನಿಗೆ ಧೈರ್ಯ ತುಂಬಿದ್ದಾರೆ.
ಆದರೆ, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರ ನಿಲುವಿಗೆ ನಿಧಾನವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಚಿವ ರಮೇಶ್ಜಾರಕಿಹೊಳಿ, ಶಾಸಕ ಡಾ. ಸುಧಾಕರ್ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಲು ಪ್ರಾರಂಭಿಸಿರುವುದು ಮತ್ತಷ್ಟು ಶಾಸಕರು ಹೌದು ಎಂಬಂತೆ ತಲೆಯಾಡಿಸುತ್ತಿರುವುದು ಹೈಕಮಾಂಡ್ಗೆ ತಲೆಕಡಲು ಪ್ರಾರಂಭವಾಗಿದೆ.
ಬಜೆಟ್ ಮಂಡನೆ ಮಾಡಬೇಕಾ? ಬೇಡವಾ ಎಂಬ ವಿಚಾರವೇ ಇದೀಗ ಕಾಂಗ್ರೆಸ್ ವಲಯದಲ್ಲಿ ದೊಡ್ಡ ವಿಷಯವಾಗಿ ಚರ್ಚೆಯಾಗುತ್ತಿದೆ. ಬಜೆಟ್ ವಿಚಾರದಲ್ಲಿ ತಮ್ಮ ಮಾತೇ ನಡೆಯಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಹಠಕ್ಕೆ ಬಿದ್ದಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಬೇರೆಯದೇ ಸ್ವರೂಪ ಪಡೆಯುವ ಸಾಧ್ಯತೆಗಳು ಇಲ್ಲದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಎರಡನೇ ಹಂತದ ಸಂಪುಟ ವಿಸ್ತರಣೆ ಕಗ್ಗಂಟು, ಸಚಿವಾಕಾಂಕ್ಷಿಗಳ ಅಸಮಾಧಾನ ತಣಿಸಲು ನಿಗಮ-ಮಂಡಳಿಗಳ ನೇಮಕ ತಲೆಬಿಸಿಯಲ್ಲಿದ್ದ ಕಾಂಗ್ರೆಸ್ಗೆ ಇದೀಗ ಸಿದ್ದರಾಮಯ್ಯ ಅವರ ಅಸಮಾಧಾನ ಮತ್ತೂಂದು ತಲೆನೋವಾಗಿ ಪರಿಣಮಿಸಿ ಬಿಸಿತುಪ್ಪದಂತಾಗಿದೆ. ಅಂತಿಮವಾಗಿ ಬಜೆಟ್ ಮಂಡನೆ ವಿಚಾರದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಕಾರ್ಯತಂತ್ರ
ಸಚಿವ ಸಂಪುಟ ವಿಸ್ತರಣೆ ನಂತರ ಉಂಟಾಗಿದ್ದ ಅಸಮಾಧಾನ ಸ್ಫೋಟ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಹೋಗಿದ್ದು, ಆ ನಂತರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಹನ್ನೆರಡು ದಿನ ಯಾವ ನಾಯಕರ ಸಂಪರ್ಕಕ್ಕೂ ಸಿಗದಿರುವುದರ ಹಿಂದೆ ಬೇರೆಯೇ “ಲೆಕ್ಕಾಚಾರ’ ಇದೆ ಎಂದು ಹೇಳಲಾಗಿದೆ.
ಕಳೆದೆರಡು ದಿನಗಳಿಂದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಭೇಟಿ ಸಂದರ್ಭದಲ್ಲಿ ನಡೆದ ಮಾತುಕತೆಯ ವೀಡಿಯೋ ದೃಶ್ಯಾವಳಿಗಳು ಇದೀಗ ಬೇರೋನೋ ನಡೆಯುತ್ತಿದೆ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ಹನ್ನೆರಡು ದಿನಗಳ ಕಾಲ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯ ಹಾಗೂ ಮುಂದಿನ ಸ್ಥಿತಿಗತಿಗಳ ಬಗ್ಗೆ ಒಂದಷ್ಟು ಲೆಕ್ಕಾಚಾರ ಮಾಡಿ ಕಾರ್ಯತಂತ್ರ ರೂಪಿಸಿ “ಅಖಾಡ’ಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ವಾಸನೆ ಬಡಿಯುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ದಂಡು ಸಿದ್ದರಾಮಯ್ಯ ಭೇಟಿ ಕಾರ್ಯ ಶುರು ಮಾಡಿದ್ದಾರೆ.
ಮತ್ತೂಂದು ಮೂಲಗಳ ಪ್ರಕಾರ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ರಾಜ್ಯದಲ್ಲಿನ ಬೆಳವಣಿಗೆ, ಸಿದ್ದರಾಮಯ್ಯ ಅವರ ನಡೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ವಾರದಲ್ಲಿ ಒಂದು ಸಂದೇಶ ರವಾನೆಯಾಗಿ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.
ರಾಹುಲ್- ಸಿದ್ದು ಭೇಟಿ ಸಾಧ್ಯತೆ
ಇತ್ತೀಚೆಗೆ ಸಚಿವ ಕೆ.ಜೆ.ಜಾರ್ಜ್ ಅವರು ದೆಹಲಿಯಲ್ಲಿ ರಾಹುಲ್ಗಾಂಧಿ ಭೇಟಿ ಮಾಡಿದ್ದ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸುವಂತಿಲ್ಲ. ಕಾಂಗ್ರೆಸ್ 80 ಸ್ಥಾನ ಗಳಿಸಲು , ಶೇ.38 ರಷ್ಟು ಮತ ಪಡೆಯಲು ಸಿದ್ದರಾಮಯ್ಯ ಅವರ ಪರಿಶ್ರಮವಿದೆ. ಮುಸ್ಲಿಂ ಸಮುದಾಯದ ಮತ ಕ್ರೂಢೀಕರಣಕ್ಕೆ ಸಿದ್ದರಾಮಯ್ಯ ಸಾಕಷ್ಟು ಕಾರ್ಯತಂತ್ರ ರೂಪಿಸಿದ್ದರು. ಅದು ಯಶಸ್ವಿಯೂ ಆಯಿತು. ಹೀಗಾಗಿ, ಸಮ್ಮಿಶ್ರ ಸರ್ಕಾರದ ಪ್ರಮುಖ ತೀರ್ಮಾನಗಳಲ್ಲಿ ಸಿದ್ದರಾಮಯ್ಯ ಅವರ ಸಲಹೆ-ಸೂಚನೆ ಪಡೆಯುವುದು ಸೂಕ್ತ. ಒಮ್ಮೆ ನೀವು ಸಹ ದೆಹಲಿಗೆ ಕರೆಸಿಕೊಂಡು ಮಾತನಾಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಸಿದ್ದರಾಮಯ್ಯ ಬಂದ ನಂತರ ಬಹುಶಃ ರಾಹುಲ್ಗಾಂಧಿಯಿಂದ ಬುಲಾವ್ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ