ಮಣ್ಣು ಸೇರುತ್ತಿದೆ “ಅನ್ನ’ ಧಾನ್ಯ
Team Udayavani, Dec 9, 2018, 12:21 PM IST
ಬೆಂಗಳೂರು: ಪಾಳುಬಿದ್ದ ಬಂಗಲೆಯಂತಿರುವ ಪಡಿತರ ಗೋದಾಮು, ಎತ್ತ ಕಣ್ಣಾಡಿಸಿದರೂ ಜೇಡರ ಬಲೆ, ಒಳಗಡೆ ಧಾನ್ಯ, ಹೊರಗಡೆ ಧೂಳು ತುಂಬಿರುವ ಅಕ್ಕಿ ಚೀಲಗಳು, ಹುಳ ತಿನ್ನುತ್ತಿರುವ ನೂರಾರು ಮೂಟೆ ಗೋಧಿ, ಮಣ್ಣು ಪಾಲಾಗುತ್ತಿರುವ ಅನ್ನಭಾಗ್ಯ ಉಪ್ಪು. ನಗರದ ಜನರಿಗೆ ಪಡಿತರ ಸರಬರಾಜು ಮಾಡುವ ಗೋದಾಮುಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ಅವರು ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಂಡು ಬಂದ ದೃಶ್ಯಗಳಿವು.
ಪಡಿತರ ಧಾನ್ಯಗಳ ಗುಣಮುಟ್ಟದ ಕೊರತೆ, ಅಕ್ರಮ ದಾಸ್ತಾನು ಹಾಗೂ ವಿತರಣೆ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು, ಇಲಾಖೆ ಕಾರ್ಯದರ್ಶಿ ಸಾವಿತ್ರಿ, ಆಯುಕ್ತ ಕುಮಾರ್ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳ ಜತೆಗೆ ಯಶವಂತಪುರದ ಎರಡು ಗೋದಾಮುಗಳಿಗೆ ಶನಿವಾರ ಧಿಡೀರ್ ಭೇಟಿ ನೀಡಿದ್ದರು.
ಪಡಿತರ ದಾಸ್ತಾನು ಲೆಕ್ಕ, ಗೋದಾಮುಗಳ ನಿರ್ವಹಣೆ, ಆಕ್ರಮ ದಾಸ್ತಾನು ಸಂಗ್ರಹ ಕುರಿತು ಸಚಿವರು ಪರಿಶೀಲನೆ ನಡೆಸಿದರು. ಈ ವೇಳೆ, ಗೋದಾಮುಗಳಲ್ಲಿ ಒಂದೂವರೆ ವರ್ಷದಿಂದ ವಿತರಣೆಯಾಗದೇ ಹುಳು ಹಿಡಿದಿರುವ ಸುಮಾರು 103 ಕ್ವಿಂಟಾಲ್ಗೂ ಅಧಿಕ ಪಡಿತರ ಗೋಧಿ, ಮಣ್ಣು ಪಾಲಾಗಿರುವ ಎರಡು ಕ್ವಿಂಟಾಲ್ ಅನ್ನಭಾಗ್ಯ ಉಪ್ಪು ಕಂಡು ಗೋದಾಮು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು ಹಾಗೂ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿರ್ವಹಣಾ ವೆಚ್ಚ ನೀಡುತ್ತಿಲ್ಲವೇ?: ಮೊದಲು ಯಶವಂತಪುರದಲ್ಲಿರುವ ವಿಜಯನಗರ ದಾಸ್ತಾನು ಸಗಟು ಮಳಿಗೆಗಳಿಗೆ ಭೇಟಿ ನೀಡಿದ ಸಚಿವ ಜಮೀರ್, ಅಲ್ಲಿನ ಪಡಿತರ ಅಕ್ಕಿ, ಬೇಳೆಗಳ ಲೆಕ್ಕ ಕೇಳಿ ಪಡೆದರು. ನಂತರ ತಾವೇ ಖದ್ದಾಗಿ ದಾಸ್ತಾನು ಚೀಲಗಳನ್ನು ಎಣಿಸಿ ಹಾಕಿ ಲೆಕ್ಕ ಪಕ್ಕಾ ಮಾಡಿಕೊಂಡರು. ಆ ನಂತರ ಅಲ್ಲಿ ಸಾಕಷ್ಟು ಚೀಲಗಳು ತೂತು ಬಿದ್ದಿರುವುದು ಹಾಗೂ ಧಾನ್ಯಗಳು ನೆಲಕ್ಕೆ ಚಲ್ಲಿರುವುದು ಕಂಡುಬಂತು.
ಸುತ್ತಲೂ ಜೇಡರ ಬಲೆ, ಚೀಲದ ಮೇಲೆಲ್ಲ ದೂಳು ತುಂಬಿದ್ದು ಕಂಡು ಸಚಿವರು ಗೋದಾಮು ವ್ಯವಸ್ಥಾಪಕರ ವಿರುದ್ಧ ಗರಂ ಆದರು. ಮಧ್ಯಪ್ರವೇಶಿಸಿದ ಗೋದಾಮು ವ್ಯವಸ್ಥಾಪಕರು, ಇಲಿಗಳ ಕಾಟ ಹೆಚ್ಚಿದೆ ಹಾಗೂ ಚೀಲದ ಗುಣಮಟ್ಟ ಕಳಪೆಯಾಗಿದೆ ಎಂದು ಕಾರಣ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಕೂಡಲೇ ಎಚ್ಚೆತ್ತ ಸಚಿವರು, ಹಾಗಾದರೆ ಗೋದಾಮು ನಿರ್ವಹಣೆಗೆ ಕೊಡುತ್ತಿರುವ ವೆಚ್ಚ ಎಲ್ಲಿ ಹೋಗುತ್ತಿದೆ? ಎಂದು ಪ್ರಶ್ನಿಸಿದಾಗ ಉತ್ತರಿಸಲು ಗೋದಾಮು ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.
ಹಾಸ್ಟಲ್ಗೆ ವಿತರಿಸಬೇಕಿದ್ದ ಗೋಧಿ ಪತ್ತೆ: “ವಿಜಯನಗರ-2′ ಗೋದಾಮಿಗೆ ಹೋದಾಗ ಅಲ್ಲಿ ಪರಿಶಿಷ್ಟ ಹಾಸ್ಟಲ್ಗೆ ವಿತರಿಸಬೇಕಿದ್ದ 103 ಕ್ವಿಂಟಾಲ್ ಹಳೇ ಗೋಧಿ ದಾಸ್ತಾನು ಪತ್ತೆಯಾಯಿತು. ಒಂದು ವರ್ಷದಿಂದ ದಾಸ್ತಾನು ಗೋದಾಮಿನಲ್ಲೇ ಇದ್ದಿದ್ದರಿಂದ ಆ ಚೀಲಗಳು ಸಂಪೂರ್ಣ ಧೂಳು ಹಿಡಿದಿದ್ದವು.
ಚೀಲದೊಳಗಿನ ಗೋಧಿಯನ್ನು ಹುಳ ತಿನ್ನುತ್ತಿದ್ದವು. ಆ ಗೋಧಿಯನ್ನು ಸಚಿವ ಕೈಯಲ್ಲಿ ಹಿಡಿದು ಅಧಿಕಾರಿಗಳಿಗೆ ತೋರಿಸಿ, ವಿದ್ಯಾರ್ಥಿಗಳಿಗೆ ಕೊಡಬೇಕಾದ ಆಹಾರವನ್ನು ಹುಳು ಹಿಡಿಸಿ ಹಾಳು ಮಾಡಿದ್ದೀರಿ. ಇದುವೇನಾ ನಿಮ್ಮ ನಿರ್ವಹಣೆ? ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಆ ಗೋಧಿಯನ್ನು ವಲಯ ಆಹಾರ ಅಧಿಕಾರಿಗೆ ನೀಡಿ ಗುಣಮಟ್ಟ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದರು.
ಬಳಿಕ ವಲಯ ಅಧಿಕಾರಿಗಳನ್ನು ಹಾಗೂ ಗೋದಾಮು ವ್ಯವಸ್ಥಾಪಕರುಗಳಿಗೆ ಗೋದಾಮು ಸ್ವತ್ಛತೆ ಕಾಪಾಡುವಂತೆ ಹಾಗೂ ಇಲಿ ಕಾಟಕ್ಕೆ ಅಗತ್ಯ ಔಷಧ ಸಿಂಪಡಿಸುವಂತೆ ಸೂಚಿಸಿದರು. ಮುಂದಿನ ಬಾರಿ ಭೇಟಿ ನೀಡಿದಾಗ ಇದೇ ರೀತಿ ಅವ್ಯವಸ್ಥೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಗರದ ಮಹಾಲಕ್ಷ್ಮೀ ಬಡಾವಣೆಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆಹಾರ ಧಾನ್ಯಗಳ ಸಮರ್ಪಕ ವಿತರಣೆ, ಬಿಪಿಎಲ… ಕಾರ್ಡುಗಳ ಹಂಚಿಕೆ, ಧಾನ್ಯಗಳ ಗುಣಮಟ್ಟದ ಬಗ್ಗೆ ಪರಿಶೀಲನೆಯನ್ನು ಸಚಿವ ಜಮೀರ್ ಅಹಮದ್ ಖಾನ್ ನಡೆಸಿದರು. ಕೆಲ ಗ್ರಾಹಕರಿಂದ ಪರಿತರ ವಿತರಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದರು.
ಹಳೇ ಸ್ಟಾಕ್ ಇರಿಸುವಂತಿಲ್ಲ: ಪಡಿತರ ಧಾನ್ಯಗಳನ್ನು ಸಂಗ್ರಹಿಸುವ ಯಾವುದೇ ಗೋದಾಮುಗಳಲ್ಲಿ ಹಳೇ ದಸ್ತಾನು ಇರಿಸುವಂತಿಲ್ಲ. ಈ ಕುರಿತು ಸಂಬಂಧಪಟ್ಟ ಉಪನಿರ್ದೇಶಕರು ಹಾಗೂ ಆಹಾರ ಅಧಿಕಾರಿಗಳು ಪ್ರತಿ 10 ದಿನಳಿಗೊಮ್ಮೆ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದರು.
ತಮ್ಮ ವ್ಯಾಪ್ತಿಯ ಪಡಿತರ ವಿತರಣಾ ಕೇಂದ್ರಗಳಿಗೆ ಅಗತ್ಯವಿರುವಷ್ಟೇ ಪಡಿತರ ತರಿಸಿಕೊಳ್ಳಬೇಕು. ಹೆಚ್ಚುವರಿಯಾದರೆ ಆ ಕುರಿತು ಇಲಾಖೆ ನಿರ್ದೇಶಕರಿಗೆ ಕಡ್ಡಾಯವಾಗಿ ಪತ್ರ ಬರೆದು ತಿಳಿಸಬೇಕು. ಆಗ ಹೆಚ್ಚುವರಿ ದಸ್ತಾನನ್ನು ಕೊರತೆ ಇರುವ ವಲಯಗಳಿಗೆ ಹಂಚಿಕೆ ಮಾಡಲು ಸಹಾಯವಾಗುತ್ತದೆ ಎಂದು ಸಚಿವರು ಗೋದಾಮು ಉಸ್ತುವಾರಿ ಅಧಿಕಾರಿಗಳಿಗೆ ತಿಳಿಸಿದರು.
ಮಣ್ಣುಪಾಲಾಗಿರುವ ಅನ್ನಭಾಗ್ಯ ಉಪ್ಪು: ಅನ್ನಭಾಗ್ಯ ಯೋಜನೆಯಡಿ ಈ ಹಿಂದೆ ಉಪ್ಪು ವಿತರಿಸಲಾಗುತ್ತಿತ್ತು. ಆದರೆ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆಯಾದ ನಂತರ ಉಪ್ಪು ವಿತರಣೆ ನಿಲ್ಲಿಸಲಾಗಿತ್ತು. ಆದರೆ, ಆ ವೇಳೆ ಬಂದಿದ್ದ ಉಪ್ಪಿನ ದಾಸ್ತಾನಿನ ಪೈಕಿ 180ರಿಂದ 200 ಕೆ.ಜಿ ಉಪ್ಪು ಗೋದಾಮಿನಲ್ಲೇ ಉಳಿದಿರುವುದು ಪರಿಶೀಲನೆ ವೇಳೆ ಪತ್ತೆಯಾಯಿತು.
ಈ ಕುರಿತು ಸಚಿವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಈಗಾಗಲೇ ಹಳೇ ಉಪ್ಪು ತೆಗೆದುಕೊಂಡು ಹೋಗಲು ಟೆಂಡರ್ ಆಗಿದೆ. ಆದರೆ ಟೆಂಡರ್ ಪಡೆದವರು ಬಾರದ ಹಿನ್ನೆಲೆ ಉಪ್ಪು ಇಲ್ಲೇ ಉಳಿದಿದೆ ಎಂದರು. ಇದೇ ರೀತಿ ರಾಜ್ಯದ ಎಲ್ಲಾ ಪಡಿತರ ಗೋದಾಮುಗಳಲ್ಲಿ ಉಳಿದಿರುವ, ಹಳೆಯ ಸ್ಟಾಕ್ ಬಗ್ಗೆ ಮಾಹಿತಿ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪಡಿತರ ಅಕ್ರಮ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ ಪಡಿತರ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಬೆಂಗಳೂರಿನ ಗೋದಾಮುಗಳಿಗೆ ಭೇಟಿ ನೀಡಿತ್ತಿದ್ದು, ಬೆಳಗಾವಿ ಅಧಿವೇಶನದ ನಂತರ ರಾಜ್ಯಾದ್ಯಂತ ಪರಿಶೀಲನೆ ನಡೆಸಲಾಗುವುದು. ಯಶವಂತಪುರದ ವಿಜಯನಗರ ಗೋದಾಮು ಅವ್ಯವಸ್ಥೆ ಸಂಬಂಧ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚಿಸಿದ್ದು, ತಪ್ಪು ಸಾಬೀತಾದರೆ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು.
-ಜಮೀರ್ ಅಹಮದ್ ಖಾನ್