ಸೂಪರ್ ಸ್ಪೆಷಾಲಿಟಿ ಆಸ್ಪ ತ್ರೆ ಲೋಕಾರ್ಪಣೆ
ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ವತಿಯಿಂದ ನಿರ್ಮಾಣಗೊಂಡಿರುವ ಆಸ್ಪತ್ರೆ
Team Udayavani, Nov 15, 2021, 10:38 AM IST
ಬೆಂಗಳೂರು: ಮಾನಸಿಕ ಹಾಗೂ ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಒಂದರಲ್ಲಿ ವ್ಯತ್ಯಾಸವಾದರೂ ಆರೋಗ್ಯಯುತ ಜೀವನ ನಡೆಸುವುದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ವತಿಯಿಂದ ಭಾನುವಾರ ಬೆಂಗಳೂರಿನ ಇನ್ಫೆಂಟ್ರಿ ರಸ್ತೆ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಹಿಳಾ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡುವ ಜತಗೆ ಅದನ್ನು ಸುಸ್ಥಿತಿಯಲ್ಲಿ ಇಟ್ಟಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು. ನಗರದಲ್ಲಿ ಪರಿಸರ ಮಾಲಿನ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ಇದನ್ನೂ ಓದಿ:- ಬಾರ್ ಬೇಡ ಎಂದು ಪ್ರತಿಭಟಿಸಿದ್ದ ವಿರುದ್ಧ ಪೊಲೀಸರ ಗೂಂಡಾ ವರ್ತನೆ
ಪ್ರಸ್ತುತ ಬೆಂಗಳೂರು ಸೇರಿದಂತೆ ವಿವಿಧ ನಗರ ವಾಸಿಗಳು ಶುದ್ಧ ಗಾಳಿಗಾಗಿ ಬೇರೆ ಪ್ರದೇಶಕ್ಕೆ ತೆರಳುವ ಪರಿಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್ ಮಾತನಾಡಿ, ಇಂದು 35ರಿಂದ 40 ವರ್ಷದ ಮಹಿಳೆಯರು ಗರ್ಭ ಧರಿಸುತ್ತಿದ್ದಾರೆ.
ಅಂಥ ತಾಯಿ ಮತ್ತು ಮಗುವಿಗೆ ಬಹು-ಮಾದರಿಯಲ್ಲಿ ಆರೈಕೆ ಮಾಡುವ ಬೆಂಗಳೂರು ನಗರದ ಮೊದಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಇಲ್ಲಿ ನವಜಾತ ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದವರಿಗೆ ವಿಶೇಷ ಮತ್ತು ವೈಯಕ್ತಿಕ ಆರೈಕೆ ಮಾಡಲಾಗುತ್ತದೆ.
ಆಸ್ಪತ್ರೆಯಲ್ಲಿ ಪ್ರಸೂತಿ, ಸ್ತ್ರೀರೋಗ ಶಾಸ್ತ್ರ, ಭ್ರೂಣದ ಔಷಧ, ಹೃದ್ರೋಗ, ಶ್ವಾಸಕೋಶಶಾಸ್ತ್ರ, ಅಂತಃ ಸ್ರಾವಶಾಸ್ತ್ರ, ಮೂಳೆಚಿಕಿತ್ಸೆ, ನೆಫ್ರಾಲಜಿ, ನರವಿಜ್ಞಾನ, ಮನೋವೈದ್ಯಶಾಸ್ತ್ರ, ಮಕ್ಕಳ ಉಪ ವಿಭಾಗಗಳು 24/7 ಅವಧಿಯಲ್ಲಿ ರೋಗಿಯ ಕಾಳಜಿ ವಹಿಸಲಿದೆ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೆ., ಶಾಸಕರಾದ ಎನ್.ಎ. ಹ್ಯಾರಿಸ್, ಡಾ.ಶಾಮನೂರು ಶಿವಶಂಕರಪ್ಪ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕಿ ಮತ್ತು ಪ್ರಮುಖ ಪ್ರಸೂತಿ ತಜ್ಞೆ ಡಾ.ಪ್ರತಿಮಾ ರೆಡ್ಡಿ, ನಟಿ ಅಪರ್ಣಾ ಇತರರು ಇದ್ದರು.